ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಹೆಸರು ಅಮೃತ ಅಯ್ಯರ್

ತಮಿಳಿನ ನಾಲ್ಕು ಚಿತ್ರಗಳಲ್ಲಿ ನಟಿಸಿರುವ, ಇತ್ತೀಚೆಗಷ್ಟೆ ವಿಜಯ್ ಆಂಟೋನಿ ಜತೆ ‘ಕಾಳಿ’ ಚಿತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡ ನಟಿ ಈಕೆ. ಈಗ ‘ಗ್ರಾಮಾಯಣ’ದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ದೇವನೂರು ಚಂದ್ರು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಟೀಸರ್ ಗಾಜನೂರಿನಲ್ಲಿ ನಡೆಸಲಾಗಿದ್ದು, ಟೀಸರ್ ಬಿಡುಗಡೆಯ ನಂತರ ಮುಂದಿನ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಎಲ್‌ಎನ್ ಮೂರ್ತಿ ನಿರ್ಮಾಣದ ಈ ಚಿತ್ರದ ಫಸ್ಟ್ ಲುಕ್ ವರಮಹಾಲಕ್ಷ್ಮೀ ಹಬ್ಬಕ್ಕೆ ಅನಾವರಣಗೊಳ್ಳಲಿದೆ. ಅದೇ ದಿನ ಚಿತ್ರದ ಟೀಸರ್ ಕೂಡ ಆಚೆ ಬರಲಿದೆ. ಟೀಸರ್ ಚಿತ್ರೀಕರಣದ ನೆಪದಲ್ಲಿ ರಾಜ್‌ಕುಮಾರ್ ಕುಟುಂಬದ ಸದಸ್ಯರು ಗಾಜುನೂರಿಗೆ ಆಗಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಮಂಗಳ ರಾಘವೇಂದ್ರ ಅವರೂ ಕೂಡ ಗಾಜನೂರು ತಲುಪಿದ್ದು, ‘ಗ್ರಾಮಾಯಣ’ ಚಿತ್ರತಂಡದಲ್ಲಿ ಹೊಸ ಚೈತನ್ಯ ಮೂಡಿದೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕಣ್ಣಿನಲ್ಲಿ ಗ್ರಾಮಾಯಣ ಸೆರೆಯಾಗಲಿದೆ. ಸಿನಿಮಾ ಸೆಟ್ಟೇರಿದಾಗ ಚಿತ್ರಕ್ಕೆ ನಾಯಕಿ ಸಿಕ್ಕಿರಲಿಲ್ಲ. ಈಗ ತಮಿಳಿನಿಂದ ಅಮೃತ ಅಯ್ಯರ್ ಆಗಮನದೊಂದಿಗೆ ಚಿತ್ರೀಕರಣದ ಕೆಲಸಗಳಿಗೆ ವೇಗ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred