ಪತ್ರಕರ್ತ ವಿಜಯ್ ಭರಮಸಾಗರ ಪತ್ರಿಕಾ ವೃತ್ತಿಯ ಜತೆಗೀಗ ಸಿನಿಮಾ ನಿರ್ದೇಶನದ ಸಾಹಸಕ್ಕೂ ಕೈ ಹಾಕಿದ್ದಾರೆ.

ಬೆಂಗಳೂರು (ಜ.26): ಪತ್ರಕರ್ತ ವಿಜಯ್ ಭರಮಸಾಗರ ಪತ್ರಿಕಾ ವೃತ್ತಿಯ ಜತೆಗೀಗ ಸಿನಿಮಾ ನಿರ್ದೇಶನದ ಸಾಹಸಕ್ಕೂ ಕೈ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ವರದಿಗಾರಿಕೆ ಮೂಲಕವೇ ಸಿನಿಮಾ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಅವರೀಗ, ‘ಭಾರತಿಪುರ ಕ್ರಾಸ್’ ಹೆಸರಿನ ಕಿರುಚಿತ್ರವೊಂದನ್ನ ನಿರ್ದೇಶಿಸಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಸಿನಿಮಾ ನಿರ್ದೇಶಕನಾಗಬೇಕೆಂದುಕೊಂಡಿದ್ದ ಅವರ ಬಹು ದಿನದ ಆಸೆ ಈಡೇರಿದಂತಾಗಿದೆ.

ಇದೊಂದು ವಿಭಿನ್ನ ಕಥಾ ಹಂದರ ಕಿರುಚಿತ್ರ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಅವರೇ ನಿರ್ದೇಶನ ಮಾಡಿದ್ದಾರೆ. ಡಿ.ಸಿ.ಎ ಬ್ರದರ್ಸ್ ಸಂಸ್ಥೆಯಡಿ ಇದು ನಿರ್ಮಾಣವಾಗಿದೆ. ಹೆಸರಿಗೆ ಇದು ಕಿರುಚಿತ್ರವಾದರೂ ಸಿನಿಮಾ ಜಗತ್ತಿನಲ್ಲಿ ಇದು ಸಾಕಷ್ಟು ಸುದ್ದಿ ಆಗುತ್ತಿರುವುದು ಮತ್ತು ಕುತೂಹಲ ಹುಟ್ಟಿಸಿದ್ದು ಹೆಸರಾಂತ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ ಕಾರಣಕ್ಕೆ.

ಯಾಕಂದ್ರೆ, ಸುದೀಪ್ ತಮ್ಮ ಸಿನಿ ಕೆರಿಯರ್‌ನಲ್ಲಿ ಈ ತನಕ ಯಾವುದೇ ಕಿರುಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ‘ಭಾರತಿಪುರ ಕ್ರಾಸ್’ ಕಿರುಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡುವ ಮೂಲಕ ಅಲ್ಲೂ ತಮ್ಮ ಸ್ನೇಹದ ದೊಡ್ಡತನ ಮೆರೆದಿದ್ದಾರೆ. ಈ ಕಾರಣಕ್ಕಾಗಿಯೂ ‘ಭಾರತಿಪುರ ಕ್ರಾಸ್’ ಕಿರುಚಿತ್ರಗಳ ಜಗತ್ತಿನಲ್ಲಿ ದೊಡ್ಡ ಸದ್ದು ಮಾಡುತ್ತಿದೆ.