ಸುದೀಪ್, ದರ್ಶನ್ ಮುನಿಸು ಮರೆತು ಒಂದಾಗ್ತಾರಾ?
ಇವರಿಬ್ಬರು ಸ್ಯಾಂಡಲ್ವುಡ್ನ ಸ್ಟಾರ್ ನಟರು. ಕುಚ್ಚಿಕೂ ಸ್ನೇಹಿತರು. ಒಂದು ಸಣ್ಣ ವಿಷಯಕ್ಕೆ ಬಂದ ಮಾತು ಇಬ್ಬರನ್ನು ದೂರವಾಗಿಸಿತ್ತು. ಈಗ ಇವರಿಬ್ಬರು ತಮ್ಮ ಮುನಿಸನ್ನು ಮರೆತು ಒಂದಾಗಲು ಸಿದ್ದವಾಗಿದೆ ವೇದಿಕೆ. ಯಾರು ಆ ನಟರು? ಎಲ್ಲಿ ಒಂದಾಗುತ್ತಿದ್ದಾರೆ?
ಬೆಂಗಳೂರು (ಆ. 03): ಕಿಚ್ಚ ಸುದೀಪ್, ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏನಪ್ಪಾ, ಇದು ಸರ್ಪ್ರೈಸ್ ಅಂತಿದಿರಾ? ಹೌದು. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ದರ್ಶನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಮುನಿಸಿಕೊಂಡಿದ್ದ ಸುದೀಪ್ ದರ್ಶನ್ ಮತ್ತೆ ಒಂದಾಗಲಿದ್ದಾರೆ. ಸ್ಯಾಂಡಲ್’ವುಡ್ ಹಿರಿಯಣ್ಣ ಅಂಬರೀಶ್ ಇವರಿಬ್ಬರಿಗೆ ಸಂಧಾನ ಮಾಡಿಸಲಿದ್ದಾರೆ. ಆಡಿಯೋ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ದರ್ಶನ್’ರನ್ನು ಒಂದು ಮಾಡಲಿದ್ದಾರೆ ಅಂಬರೀಶ್. ನಿರ್ಮಾಪಕ ಜಾಕ್ ಮಂಜು ದರ್ಶನ್ ಗೆ ಆಡಿಯೋ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಆಡಿಯೋ ಕಾರ್ಯಕ್ರಮಕ್ಕೆ ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರು ಆಗಮಿಸುತ್ತಿದ್ದಾರೆ.
ಕುಚಿಕೋ ಗೆಳೆಯರ ಮನಸ್ತಾಪಕ್ಕೆ ಕಾರಣವೇನು?
ದರ್ಶನ್ ಗೆ ಮೆಜೆಸ್ಟಿಕ್ ಸಿನೆಮಾದಲ್ಲಿ ನಟಿಸಲು ನಾನೇ ಅವಕಾಶ ಕೊಟ್ಟಿದ್ದು ಅಂತಾ ಸುದೀಪ್ ಹೇಳಿದ್ದರು. ಸುದೀಪ್ ಮಾತಿನಿಂದ ದರ್ಶನ್ ನೊಂದುಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ನಾನು ಕಷ್ಟಪಟ್ಟು ಬೆಳೆದು ಮೇಲೆ ಬಂದವನು. ಹೀಗಿರುವಾಗ, `ಮೆಜೆಸ್ಟಿಕ್’ ಸಿನಿಮಾದಲ್ಲಿ ಅವರೇ ಅವಕಾಶ ಕೊಡಿಸಿದ್ದರೆ ಅದನ್ನು ಮೊದಲು ಸಾಬೀತುಪಡಿಸಲಿ. ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಲ್ಲಿ-ಇಲ್ಲಿ ಮಾತನಾಡುವುದು ಬೇಡ’ ಎಂದು ದರ್ಶನ್ ಹೇಳಿದ್ದರು. ಅಲ್ಲಿಂದಲೇ ಇಬ್ಬರ ನಡುವಿನ ಮನಸ್ತಾಪ ಶುರುವಾಗಿತ್ತು.