ಹೊಸಬರ ‘ಲಾಕ್’ಹೆಸರಿನ ಸಿನಿಮಾ ಇದೇ ತಿಂಗಳು 18 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ರೋಹಿತ್ ಅಶೋಕ್ ಕುಮಾರ್ ಹಾಗೂ ಪಿ.ರಾಮ್ ನಿರ್ಮಾಣದಲ್ಲಿ ಯುವ ನಿರ್ದೇಶಕ ಪರುಶುರಾಮ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು. ಮೂವರಿಗೂ ಇದು ಮೊದಲ ಚಿತ್ರ.  

ಹೊಸಬರು ಹೊಸತನದೊಂದಿಗೆ ಬರಬೇಕೆನ್ನುವ ತುಡಿತದೊಂದಿಗೆ ಸಮಾಜದಲ್ಲಿ ಲಾಕ್ ಆಗಿ ಉಳಿದಿರುವ ಕೆಲವು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲು ಹೊರಟಿದೆಯಂತೆ ಚಿತ್ರತಂಡ. ಅದರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ನಿಗೂಢತೆಯೂ ಒಂದು.

Add Asianetnews Kannada as a Preferred SourcegooglePreferred

ಸ್ವಾತಂತ್ರಕ್ಕಾಗಿ ತಮ್ಮದೇ ಸೈನ್ಯವೊಂದನ್ನು ಕಟ್ಟುವ ಮಹದಾಸೆಯೊಂದಿಗೆ ವಿದೇಶಕ್ಕೆ ಹೋಗಿದ್ದ ನೇತಾಜಿಯವರು,ವಿಮಾನ ಅಪಘಾತದಲ್ಲಿ ಮೃತಪಟ್ಟರು ಎನ್ನುವುದು ಅರ್ಧ ಸತ್ಯ. ಯಾಕಂದ್ರೆ ಅವರು ಆ ನಂತರವೂ ನಿಗೂಢವಾಗಿ ಬದುಕುಳಿದಿದ್ದರು ಎನ್ನುವ ಮಾತುಗಳು ಇವೆ. ಇದು ನಿಜವೇ? ಅವರು ಬದುಕಿದ್ದರೆ ಅಷ್ಟು ದಿನ ಎಲ್ಲಿದ್ದರು? ಯಾಕಾಗಿ ನಿಗೂಢವಾಗಿ ಉಳಿದಿದ್ದರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಹಾಗೆ ಚಿತ್ರದಲ್ಲಿ ಕೆಲವು ನಿಗೂಢ ಸಂಗತಿಗಳನ್ನು ತೆರೆಯಲ್ಲಿ ತೋರಿಸುವ ಪ್ರಯತ್ನ ಆಗಿದೆ ಎನ್ನುತ್ತಾರೆ ನಿರ್ದೇಶಕ ಪರುಶುರಾಮ್.

ಅದು ಹೇಗೆ ಎನ್ನುವ ಕುತೂಹಲದ ನಡುವೆ ನೇತಾಜಿ ಪಾತ್ರಕ್ಕೆ ಇಲ್ಲಿ ಬಣ್ಣ ಹಚ್ಚಿದ್ದು ಹಿರಿಯ ನಟ ಶಶಿಕುಮಾರ್. ಬಹುದಿನಗಳ ನಂತರವೀಗ ನೇತಾಜಿ ಪಾತ್ರದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿರುವ ಶಶಿಕುಮಾರ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದೇ ಪ್ರಮುಖ ಪಾತ್ರವಂತೆ.