ರಾಮಕೃಷ್ಣ ಹೇಳಿದ ಮಾರುತಿ ಕಾರ್ ಕತೆಗಳು
ನಟ ರಾಮಕೃಷ್ಣ ಯಾರಿಗೆ ಗೊತ್ತಿಲ್ಲ. ರಂಗನಾಯಕಿ, ಮಾನಸ ಸರೋವರ, ಪಡುವಾರಳ್ಳಿ ಪಾಂಡವರು, ಬೆಂಕಿಯಲ್ಲಿ ಅರಳಿದ ಹೂವು, ಬಬ್ರುವಾಹನ ಹೀಗೆ ಅವರ ನಟನೆಯ ಸಿನಿಮಾಗಳ ಪಟ್ಟಿ ನೋಡುತ್ತ ಹೋಗಬಹುದು.
200ಕ್ಕೂ ಜಾಸ್ತಿ ಸಿನಿಮಾಗಳಲ್ಲಿ ನಟಿಸಿದವರು. ಒಂದುಕಾಲದಲ್ಲಿ ಸೂಪರ್ಹಿಟ್ ನಟ ರಾಮಕೃಷ್ಣ. ಇಂಥ ನಟನ ಜೀವನದಲ್ಲಿ ಯಕಶ್ಚಿತ ಒಂದು ಮಾರುತಿ ಕಾರು ಮಹತ್ವದ ಪಾತ್ರ ವಹಿಸಿದ್ದು ಯಾರಿಗೆ ಗೊತ್ತು? ಆ ಕಾರಿನ ರಸವತ್ತಾದ ಕತೆಗಳನ್ನು ಅವರೇ ಹೇಳುತ್ತಾರೆ ಕೇಳಿ.
* ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್ರಿಂದ ರೂಪುಗೊಂಡ ವ್ಯಕ್ತಿ ನಾನು. ನನ್ನ ಜೀವನಕ್ಕೆ ಮೊದಲು ಎಂಟ್ರಿ ಕೊಟ್ಟಿದ್ದೇ ಮಾರುತಿ 800 ಕಾರು.
*1986ರಲ್ಲಿ ನಾನು ಮಾರುತಿ 800 ತೆಗೆದುಕೊಂಡಾಗ ನನ್ನ ಎಲ್ಲರು ದೇವಮಾನವನಂತೆ ಕಂಡಿದ್ದನ್ನು ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ.
* ಮನೆಗೆ ಕಾರು ಬಂದ ಕೂಡಲೇ ಅದನ್ನು ನೋಡಕ್ಕೆ ಬಂದಿದ್ದು ಅಂಬರೀಶ್. ಏನಪ್ಪ ಕಾರಿನ ಒಡೆಯ ಆಗ್ಬಿಟ್ಟೆ ಎಂದು ಅವರದ್ದೇ ಸ್ಟೈಲಿನಲ್ಲಿ ನನ್ನ ಕಾಳೆಲೆಯುತ್ತ ನನ್ನ ಕಾರು ಏರಿ ಸೀದಾ ಅದನ್ನು ಅವರ ಮನೆಗೆ ತೆಗೆದುಕೊಂಡು ಹೋದರು. ಒಂದು ದಿನ ಅಂಬರೀಶ್ ಅವರೇ ಓಡಿಸಿದ್ದು.
* ನಾನು ಚಿತ್ರೀಕರಣ ಸೆಟ್ಗೆ ಒಮ್ಮೆ ಇದೇ ಕಾರಿನಲ್ಲಿ ಹೋದಾಗ ಕಾರು ನೋಡಿದ ಡಾ ರಾಜ್ಕುಮಾರ್ ಅವರು ‘ಅರೆರೇ... ಎಷ್ಟು ಚೆನ್ನಾಗಿದೆ’ ಎಂದು ಕಾರು ಮುಟ್ಟಿ ಫೋಟೋ ತೆಗೆಸಿಕೊಂಡರು.
* ಒಂದು ದಿನ ಕ್ರೇಜಿಸ್ಟಾರ್ ರವಿಚಂದ್ರನ್ ಫೋನ್ ಮಾಡಿ ನನ್ನ ಕಾರು ಚಿತ್ರೀಕರಣಕ್ಕೆ ಬೇಕು ಅಂತ ಕೇಳಿದ್ದರು. ಕ್ರೇಜಿಸ್ಟಾರ್ ತಮ್ಮ ಹಲವು ಚಿತ್ರಗಳಲ್ಲಿ ನನ್ನ ಕಾರು ಬಳಸಿಕೊಂಡಿದ್ದರು.
* ಕಾರು ತಗೊಂಡ ಕನ್ನಡ ಚಿತ್ರರಂಗದ ಮೊದಲ ಹೀರೋ ನಾನೇ ಆಗಿದ್ದೆ. ನಾನು ಕಾರು ತಗೊಂಡ 8 ದಿನಕ್ಕೆ ನಟ ಶಿವರಾಜ್ಕುಮಾರ್ ಸ್ವಂತ ಕಾರು ಕೊಂಡರು. 32 ವರ್ಷಗಳಿಂದ ಈ ಕಾರಿನಲ್ಲೇ ಓಡಾಡುತ್ತಿದ್ದೇನೆ. ಇದುವರೆಗೂ ಯಾವುದೇ ರಿಪೇರಿ ಬಂದಿಲ್ಲ.