ಕ್ರೇಜಿಸ್ಟಾರ್ ಪುತ್ರನಿಗೆ ಯುನಿವರ್ಸಲ್ ಸ್ಟಾರ್ ಪುತ್ರಿ ನಾಯಕಿ
. ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿರುವ ಕಾರಣ ಬಹುಭಾಷಾ ನಟಿಯನ್ನೇ ವಿಕ್ರಂಗೆ ಜೋಡಿ ಮಾಡುವ ಯೋಚನೆ ನಿರ್ದೇಶಕರದ್ದು.
ಬೆಂಗಳೂರು(ಜು.02): ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ನಾಯಕನಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ನಟಿ ಅಕ್ಷರಾ ಹಾಸನ್ ನಾಯಕಿ ಆಗಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಾಗಶೇಖರ್ ನಿರ್ದೇಶಿಸಿ, ಕನಕಪುರ ಶ್ರೀನಿವಾಸ್ ನಿರ್ಮಾಣ ಚಿತ್ರ ಇದಾಗಿದೆ.
ಇನ್ನೂ ಹೆಸರಡಿದ ಈ ಚಿತ್ರದ ಮೂಲಕ ವಿಕ್ರಂ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇವರ ನಟನೆಯ ಮೊದಲ ಚಿತ್ರಕ್ಕೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಅವರನ್ನು ಕರೆತರುತ್ತಿದ್ದಾರೆ ನಿರ್ದೇಶಕ ನಾಗಶೇಖರ್. ಈಗಾಗಲೇ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿರುವ ಕಾರಣ ಬಹುಭಾಷಾ ನಟಿಯನ್ನೇ ವಿಕ್ರಂಗೆ ಜೋಡಿ ಮಾಡುವ ಯೋಚನೆ ನಿರ್ದೇಶಕರದ್ದು. ಅಲ್ಲದೆ ಅಕ್ಷರಾ ಹಾಸನ್ ಕೂಡ ‘ಶಮಿತಾಬ್’ ಚಿತ್ರದಲ್ಲಿ ಅಭಿತಾಬ್ ಬಚ್ಚನ್ ಹಾಗೂ ಧನುಷ್ ಜತೆ ನಟಿಸಿದ್ದರು. ಈ ಚಿತ್ರದಲ್ಲಿ ನಿರ್ದೇಶಕಿ ಪಾತ್ರ ಮಾಡಿದ್ದ, ಅಕ್ಷರಾ, ತೆರೆ ಮೇಲೆಗಿಂತ ತೆರೆ ಹಿಂದೆ ಗುರುತಿಸಿಕೊಳ್ಳುವ ಕನಸು ಅವರದ್ದು.
ಈಗ ಅಕ್ಷರಾ ಹಾಸನ್, ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಷಾಢ ಮುಗಿದ ಕೂಡಲೇ ವಿಕ್ರಂ ನಟನೆಯ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ. ಹೀಗಾಗಿ ಚಿತ್ರದ ನಾಯಕಿ ಯಾರೆಂಬುದು ಗುಟ್ಟು ಬಿಟ್ಟುಕೊಡದ ಚಿತ್ರತಂಡ ಈಗ ಅಕ್ಷರಾ ಹಾಸನ್ ಅವರೊಂದಿಗೆ ಮಾತುಕತೆ ಮಾಡಿದ್ದಾರೆ. ಅಂದಹಾಗೆ ‘ರಾಮಾ ಶಾಮ ಭಾಮಾ’ ಚಿತ್ರದ ಮೂಲಕ ಕಮಲ್ ಹಾಸನ್ ಕನ್ನಡದ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆ ನಂತರ ಕನ್ನಡ ಚಿತ್ರರಂಗದ ಜತೆಗೆ ಹತ್ತಿರದ ನಂಟು ಇಟ್ಟುಕೊಂಡಿದ್ದರು. ಈಗ ಅವರ ಪುತ್ರಿ ಅಕ್ಷರಾ ಹಾಸನ್ ಕೂಡ ಅಪ್ಪನಂತೆ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚುವುದಕ್ಕೆ ಬರುತ್ತಿದ್ದಾರೆ.