ಬಸವನಗುಡಿಯಿಂದ ಎದ್ದು ಬಂದ ಲಂಬೋದರ
ಲೂಸ್ ಮಾದ ಯೋಗಿ ನವೆಂಬರ್ 2ನೇ ತಾರೀಖು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಮೇಲೆ ಸಂಗಾತಿ ಯೊಂದಿಗೆ ಫುಲ್ ಹ್ಯಾಪಿ ಮೂಡ್ನಲ್ಲಿ ಇರಬೇಕಾದರೆ ನಿರ್ದೇಶಕ ಕೃಷ್ಣರಾಜ್ ೬ನೇ ತಾರೀಖು ಕಾಲ್ ಮಾಡಿ ‘ಲಂಬೋದರ’ ಶೂಟಿಂಗ್ಗೆ ಬರಬೇಕು ಎಂದು ಕರೆಯುತ್ತಾರೆ.
ಅರೆ, ಮದುವೆಯಾಗಿ ಈಗ ನಾಲ್ಕು ದಿನವಷ್ಟೇ ಆಗಿದೆ, ಆಗಲೇ ಶೂಟಿಂಗ್ಗೆ ಹೋಗಬೇಕಾ ಎಂದು ಯೋಗಿ ಅರೆ ಕ್ಷಣ ಅಯ್ಯೋ ಅಂದುಕೊಂಡರೂ ಹೋಗಲೇಬೇಕಿತ್ತು. ಯಾಕೆಂದರೆ ಆಗ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿರುತ್ತೆ. ಇದಕ್ಕೂ ಚಿತ್ರಕ್ಕೂ ಏನು ಸಂಬಂಧ ಎಂದರೆ ಇಡೀ ಚಿತ್ರ ಸಾಗುವುದು ಬಸವನಗುಡಿಯಲ್ಲಿ. ಹೆಸರೇ ಹಾಗಿದೆ ‘ಲಂಬೋದರ, ಬಸವನಗುಡಿ ಬೆಂಗಳೂರು’ ಎಂದು. ಇದೆಲ್ಲವನ್ನೂ ಹೇಳಿಕೊಂಡಿದ್ದು ಸ್ವತಃ ಯೋಗಿ.
‘ಲಂಬೋದರ’ ಸಿನಿಮಾದ ನಾಲ್ಕನೇ ಹಾಡಿನ ಬಿಡುಗಡೆ ವೇಳೆ. ಜನವರಿಗೆ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರತಂಡ ಕಲಾವಿದರ ಸಂಘದಲ್ಲಿ ಪತ್ರಕರ್ತರ ಮುಂದೆ ಬಂದಿತ್ತು. ನಿರ್ದೇಶಕ ಕೃಷ್ಣರಾಜ್ ಮಾತು ಶುರು ಮಾಡಿ ‘ಯೋಗಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕತೆ ಮಾಡಿದ್ದೆವು. ಫನ್ನಿಯಾಗಿದೆ.
ಮೂರು ಗೆಟಪ್ಗಳಲ್ಲಿ ಯೋಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ಒಂದು ವರ್ಷ ಟೈಂ ತೆಗೆದುಕೊಂಡು ಚಿತ್ರ ಕಂಪ್ಲೀಟ್ ಮಾಡಿದ್ದೇವೆ’ ಎಂದು ಹೇಳಿಕೊಂಡರು. ಟ್ರಾವೆಲ್ ಉದ್ಯಮದಲ್ಲಿ ಹೆಸರು ಮಾಡಿರುವ ರಾಘವೇಂದ್ರ ಅವರು ಈಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಯುವ ಪ್ರತಿಭೆ ಕಾರ್ತಿಕ್ ಶರ್ಮಾಗೆ ಇದು ಮೊದಲ ಕಮರ್ಷಿಯಲ್ ಚಿತ್ರ.
ಪುಟ್ಟ ಗೌರಿ ಮದುವೆ ಧಾರಾವಾಹಿಯಿಂದ ಖ್ಯಾತಿ ಪಡೆದಿದ್ದ ಕಾರ್ತಿಕ್ ಮೊದಲ ಬಾರಿಗೇ ‘ಲಂಬೋದರ’ನೊಂದಿಗೆ ಶುಭಾರಂಭ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿರುವುದರಿಂದ ನನ್ನ ಮುಂದಿನ ಚಿತ್ರಕ್ಕೆ ಕಾರ್ತಿಕ್ ಶರ್ಮಾನೇ ಸಂಗೀತ ನೀಡಬೇಕು ಎಂದು ಓಪನ್ ಆಗಿ ವೇದಿಕೆಯ ಮೇಲೆಯೇ ಆಫರ್ ನೀಡಿದರು ಯೋಗಿ. ಚಿತ್ರದ ನಾಲ್ಕು ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಪಡೆದಿದೆ.
ಮಿಡಲ್ ಕ್ಲಾಸ್ ಫ್ಯಾಮಿಲಿ, ಎಲ್ಲಕ್ಕೂ ಲೆಕ್ಕಾಚಾರ, ಸ್ಕೂಲು, ಕಾಲೇಜಿನ ತರಲೆ, ಮಧುರವಾದ ಪ್ರೇಮವನ್ನು ಹೊತ್ತ ‘ಲಂಬೋದರ’ ಪೂರ್ಣ ತಯಾರಾಗಿರುವುದು ಬೆಂಗಳೂರಿನ ಅದರಲ್ಲೂ ಮುಖ್ಯವಾಗಿ ಬಸವನಗುಡಿಯ ಬೀದಿಗಳಲ್ಲಿ. ಅರವಿಂದ್ ಕಶ್ಯಪ್ ಕ್ಯಾಮರಾ ಕೈಚಳಕವಿರುವ ಚಿತ್ರದಲ್ಲಿ ನಾಯಕನನ್ನು ಇಕ್ಕಟ್ಟಿಗೆ ಸಿಲುಕಿಸಿ ಮಜಾ ನೋಡುವ ಜೊತೆಗೆ ನೋಡುಗರನ್ನೂ ನಗಿಸಲು ಧರ್ಮಣ್ಣ ಇದ್ದಾರೆ.
ಅಂಬರೀಷ್ ನೆನಪಿನಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡ ಚಿತ್ರ ತಂಡದ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ, ಕರಿಸುಬ್ಬು, ಶ್ಯಾಮ್ ಮೊದಲಾದವರು ಜೊತೆಗಿದ್ದರು.