ಚಿತ್ರ ಚಿಮರ್ಶೆ: ದೊರೆ ಭಗವಾನರ ಅನುಭವದ ‘ಆಡುವ ಗೊಂಬೆ’ ಇದು
‘ಆಡುವ ಗೊಂಬೆ’ಯ ಕಡೆಯ ದೃಶ್ಯದಲ್ಲಿ ವಿಷ ಕುಡಿದು ಸಾವಿನ ಅಂಚಿನಲ್ಲಿ ಇರುವ ತಮ್ಮನನ್ನು ನೋಡಲು ಅಕ್ಕ ಓಡೋಡಿ ಬರುತ್ತಾಳೆ. ಬಂದವಳೇ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮಾಡಿದ ತಪ್ಪಿಗೆಲ್ಲಾ ಪ್ರಾಯಶ್ಚಿತವೆಂಬಂತೆ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಣ್ಣೀರು ತಮ್ಮನ ಮುಖದ ಮೇಲೆ ಬಿದ್ದು ಅವನು ಸಣ್ಣಗೆ ಕಣ್ಣು ತೆರೆಯುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ‘ಅಕ್ಕನ ಅಶ್ರುಧಾರೆಯೇ ತಮ್ಮನ ಪಾಲಿಗೆ ಅಮೃತ ಬಿಂದು’ ಎನ್ನುವ ಸಾಲು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಕೆಂಡಪ್ರದಿ
ಇದಕ್ಕೂ ಮೊದಲಿನದೆಲ್ಲವೂ ಅಪ್ಪಟ ಅಕ್ಕ ತಮ್ಮನ ಸೆಂಟಿಮೆಂಟ್ಗಳು, ಪಾತ್ರಗಳ ಕಮೀಟ್ಮೆಂಟ್ಗಳು. ಚಿತ್ರವನ್ನು ರೋಚಕವಾಗಿ ದಡ ಸೇರಿಸುವುದು ನಡುವೆ ಬರುವ ಕೆಲವಷ್ಟು ತಿರುವುಗಳು. ಗೊಂಬೆ ಆಡಿಸುವಾತ ದೊರೆ ಭಗವಾನ್. ಬಂಧ, ಅನುಬಂಧ, ಸಂಬಂಧಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನಾಯಕ ಸಂಚಾರಿ ವಿಜಯ್ನನ್ನು ಹಿಂಡಿ ಹಿಪ್ಪೆಯಾಗುವಂತೆ ಆಡಿಸಿದ್ದಾರೆ. ಎಲ್ಲಾ ಪಾತ್ರಗಳ ನಡುವೆ ಸಿಲುಕಿ ಆಡುವ, ನೋವನ್ನುಣ್ಣುವ ಪಾತ್ರ ವಿಜಯ್ ಅವರದ್ದು. ಅಕ್ಕ ಸುಧಾ ಬೆಳವಾಡಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿ, ಒಬ್ಬ ಮಗನಂತಹ ತಮ್ಮನ ಅಕ್ಕನಾಗಿ ತನಗೇ ಗೊತ್ತಿಲ್ಲದೆ ಇಡೀ ಕತೆಯ ಸೂತ್ರಧಾರಿಯಾಗುತ್ತಾಳೆ. ಇದಕ್ಕೆ ಮೂಖ ಪ್ರೇಕ್ಷಕ ಮತ್ತು ಸಾಕ್ಷಿ ಅನಂತ್ನಾಗ್. ಆಟವಾಡಿಸೋದು ನಾಯಕಿಯರಾದ ನಿರೋಷ ಶೆಟ್ಟಿ ಮತ್ತು ದಿಶಾ ಕೃಷ್ಣಯ್ಯ. ಅಕ್ಕನ ಪ್ರೀತಿಯೇ ಸಂಸಾರ ಬಂಧಕ್ಕೆ ಸಿಲುಕಿಸಿ, ಕಡೆಗೆ ಅದೇ ಸೆರೆಮನೆಯ ಬಂಧನಕ್ಕೂ ತಳ್ಳಿದಾಗ ಬಿಡುಗಡೆ ಮಾಡಿಸುವುದು ನಾಯಕನ ಮೊದಲ ಪ್ರೀತಿ ರಿಶಿತಾ ಮಲ್ನಾಡ್. ಇದೆಲ್ಲವನ್ನೂ ತಮ್ಮ ದೀರ್ಘ ಅನುಭವದ ಸಾರದಿಂದ ಒಳ್ಳೆಯ ಗೊಂಬೆಯನ್ನು ದೊರೆ ಭಗವಾನ್ ಕೆತ್ತಿದ್ದಾರೆ.
ಆದರೆ ಅರೆ ಕೋರೆಗಳು ಸಾಕಷ್ಟಿವೆ. ಅದಕ್ಕೆ ಹೆಚ್ಚು ಹೊಣೆ ಹೊರಬೇಕಾದ್ದು ನಿರ್ದೇಶಕರೇ. ಒಳ್ಳೆಯ ಕತೆ ಇದ್ದರೂ ಮೌನದಲ್ಲಿಯೇ ಹೇಳಬಹುದಾದ ಸಾಕಷ್ಟು ಗಟ್ಟಿ ವಿಚಾರಗಳನ್ನು ವಾಚಾಳಿ ಮಾಡಿ ಸೂಕ್ಷ್ಮತೆಗಳನ್ನು ಕೊಂದಿದ್ದಾರೆ. ಹಿನ್ನೆಲೆ ಸಂಗೀತ ಹಳೆ ಶೈಲಿಯಿಂದ ಬಿಡಿಸಿಕೊಂಡು ಬರಲು ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿಜಯ್ ರಾಘವೇಂದ್ರ ಅವರು ಹಾಡಿರುವ ಹಾಡುಗಳು ಚೆನ್ನಾಗಿವೆ. ಜಬೇಜ್ ಕೆ ಗಣೇಶ್ ಕ್ಯಾಮರಾ ಕೆಲಸ ಚಿತ್ರವನ್ನು ಇಂದಿನ ಸನ್ನಿವೇಶಕ್ಕೆ ತಕ್ಕುದಾದಂತೆ ಮಾಡಿದೆ. ಚಿಕ್ಕಮಗಳೂರು, ಬೆಂಗಳೂರಿನ ಲ್ಲೆಯೇ ತಿರುಗಾಡುವ ಚಿತ್ರ ಸಂಗ್ರಹ ದೃಶ್ಯಗಳ ಸಹಾಯದಿಂದ ದೆಹಲಿ, ಹೈದರಾಬಾದ್ಗೆಲ್ಲಾ ಕರೆದುಕೊಂಡು ಹೋಗಿ ಬರುತ್ತಾರೆ. ಸಾಮಾನ್ಯ ಪ್ರೇಕ್ಷಕನಿಗೂ ಇದು ಚಿತ್ರತಂಡದ ಗಿಮಿಕ್ ಎನ್ನುವುದು ಗೊತ್ತೇ ಆಗುತ್ತದೆ. ಇದೆಲ್ಲದರ ನಡುವೆಯೂ ಪುಟ್ಟ ಕುಟುಂಬದ ಆಸೆ, ಆಕಾಂಕ್ಷೆ, ಯುವ ಮನಸ್ಸುಗಳ ತಲ್ಲಣವನ್ನು ಅನುಭವಸ್ಥ ದೊರೆ ಭಗವಾನ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ನಟನೆ ವಿಭಾಗದಲ್ಲಿ ಎಲ್ಲರದ್ದೂ ಗುಣಮಟ್ಟದ ಪ್ರಯತ್ನ. ಹೊಸ ಪ್ರತಿಭೆಗಳಾದ ರಿಶಿತಾ ಮಲ್ನಾಡ್, ನಿರೋಷ ಶೆಟ್ಟಿ, ದಿಶಾ ಕೃಷ್ಣಯ್ಯ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಸಂಚಾರಿ ವಿಜಯ್ ನಟನೆಯ ಜೊತೆಗೆ ಕುಣಿತವನ್ನೂ ಕಲಿತರೆ ಚೆಂದ.
ಚಿತ್ರ: ಆಡುವ ಗೊಂಬೆ
ತಾರಾಗಣ: ಸಂವಾರಿ ವಿಜಯ್. ಆನಂತ್ ನಾಗ್, ಸುಧಾ ಬೆಳವಾಡಿ, ರಿಶಿಕಾ ಮಲ್ನಾಡ್, ನಿರೋಪ ಶೆಟ್ಟಿ, ದಿಶಾ ಕೃಷ್ಣಯ್ಯ
ನಿರ್ದೇಶನ: ದೊರೆ ಭಗವಾನ್
ನಿರ್ಮಾಣ: ಎ. ಶಿವಪ್ಪ ಹಾಗು ಕೆ.ಮೇಣುಗೋಪಾಲ್
ಸಂಗೀತ: ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ: ಮಧುಸೂದನ್
ರೇಟಿಂಗ್: ***