ನೆರೆ ಸಂತ್ರಸ್ತರ ನಿಧಿಗೆ 25 ಲಕ್ಷ ರೂ ನೀಡಿದ ಸ್ಟಾರ್ ದಂಪತಿ!
ಈ ಬಾರಿಯ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಪ್ರವಾಹದಿಂದಾಗಿ ಸಾವಿರಾರು ಮಂದಿ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಸಾರ್ವಜನಿಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ನಟ ರಿತೇಶ್ ದೇಶ್ಮುಖ್ ದಂಪತಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ಮುಂಬೈ (ಆ. 13): ನಟ ರಿತೇಶ್ ದೇಶಮುಖ್, ಜೆನಿಲಿಯಾ ದೇಶ್ ಮುಖ್ ದಂಪತಿ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ 25 ಲಕ್ಷರೂ ವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ಉಕ್ಕಿ ಹರಿದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಆಸ್ತಿ ಹಾನಿಯಾಗಿದೆ. ಮಹಾರಾಷ್ಟ್ರದಲ್ಲಿಯೂ ವರುಣರಾಯನ ಆರ್ಭಟ ಜೋರಾಗಿದೆ. ಸಾಂಗ್ಲಿ, ಕೊಲ್ಹಾಪುರ, ಸತಾರಾ ಜಿಲ್ಲೆಗಳಲ್ಲಿ ಸುಮಾರು 4 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 432 ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲಿ ಎಲ್ಲರೂ ಆಶ್ರಯ ಪಡೆಯುತ್ತಿದ್ದಾರೆ.
ನೆರೆ ಸಂತ್ರಸ್ತರಿಗೆ ಸಾರ್ವಜನಿಕರಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇಂತಹ ಸಮಯದಲ್ಲಿ ಒಬ್ಬರಿಗೊಬ್ಬರು ಆಗುವುದೇ ಮಾನವೀಯತೆ ಅಲ್ಲವೇ?