ಸ್ಯಾಂಡಲ್ವುಡ್ಗೆ ಆ್ಯಕ್ಷನ್ ಕ್ವೀನ್ ಸಿಕ್ಕಿದ್ದಾರೆ!
ಬೆಳಗಾವಿ ಮೂಲದ ಬಹುಭಾಷಾ ನಟಿ ಲಕ್ಷ್ಮೀ ರೈ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಬಾರಿ ಝಾನ್ಸಿ ಅವತಾರ ಎತ್ತಲಿದ್ದಾರೆ. ಕನ್ನಡದಲ್ಲಿ ಸೆಟ್ಟೇರುತ್ತಿರುವ ‘ಝಾನ್ಸಿ’ ಚಿತ್ರದಲ್ಲಿ ಲಕ್ಷ್ಮೀ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪತ್ತಿ ವಿಎಸ್ ಗುರುಪ್ರಸಾದ್. ಈ ಹಿಂದೆ ಕೋಮಲ್ ಅಭಿನಯದ ‘ಮರ್ಯಾದೆ ರಾಮಣ್ಣ’ ಚಿತ್ರವನ್ನು ನಿರ್ದೇಶಿಸಿದವರು.
ಬೆಂಗಳೂರು (ಆ. 06): ಕನ್ನಡದಲ್ಲಿ ಲಕ್ಷ್ಮೀ ರೈ ನಟಿಸಲಿರುವ ‘ಝಾನ್ಸಿ’ ಹೆಸರಿನ ಚಿತ್ರಕ್ಕೆ ಅಧಿಕೃತ ಚಾಲನೆ ದೊರೆಯಿತು. ಆ ಮೂಲಕ ಮತ್ತೊಮ್ಮೆ ಗುರುಪ್ರಸಾದ್ ಪತ್ತಿ ಮತ್ತೊಮ್ಮೆ ಒಂದು ದೊಡ್ಡ ಚಿತ್ರದ ಮೂಲಕ ಎಂಟ್ರಿಯಾಗಿದ್ದಾರೆ. ಇದೇ ತಿಂಗಳು 29 ಕ್ಕೆ ಮುಹೂರ್ತ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಲಕ್ಷ್ಮೀ ರೈ ಸಮೇತರಾಗಿ ನಿರ್ದೇಶಕರು ಮಾಧ್ಯಮಗಳ ಮುಂದೆ ಬಂದರು. ‘ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾ ಸೆಟ್ಟೇರುತ್ತಿದೆ. ಬಹುಭಾಷಾ ನಟಿ ಲಕ್ಷ್ಮೀ ರೈ ನಟಿಸಿರುವುದು ಇನ್ನೂ ಖುಷಿ ವಿಚಾರ. ಈ ಚಿತ್ರದ ಕತೆ ಬರೆದ ಕೂಡಲೇ ಲಕ್ಷ್ಮೀ ರೈ ಅವರೇ ಇದಕ್ಕೆ ಸೂಕ್ತ ಅನಿಸಿ ಅವರಿಗೆ ಕತೆ ಕಳುಹಿಸಿದೆ. ನಂತರ ಪೂರ್ತಿ ಚಿತ್ರಕತೆಯನ್ನೂ ಕೇಳಿ ಕಾಲ್ ಶೀಟ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಹೆಚ್ಚಿವೆ.
ಹೀಗಾಗಿ ಅದಕ್ಕೆ ವಿಶೇಷವಾದ ತರಬೇತಿ ಅಗತ್ಯವಿದೆ’ ಎಂದರು ನಿರ್ದೇಶಕ ಗುರುಪ್ರಸಾದ್ ಪತ್ತಿ. ಒಬ್ಬ ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಮತ್ತು ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್, ಭೂ
ಮಾಫಿಯಾ ಸೇರಿದಂತೆ ಬೇರೆ ಬೇರೆ ವಿಷಯಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇಲ್ಲಿ ಬಾಲಿವುಡ್ನ ಮುಖೇಶ್ ರಿಷಿ, ರವಿಕಾಳೆ ಹಾಗೂ ಡ್ಯಾನಿ ಕುಟ್ಟಪ್ಪ, ತೆಲುಗಿನ ಅಶೋಕ್ ಚಿತ್ರದ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತುಂಬಾ ಗ್ಯಾಪ್ ನಂತರ ಮತ್ತೆ ಕನ್ನಡಕ್ಕೆ ಬಂದ ಸಂಭ್ರಮದಲ್ಲಿದ್ದರು ಲಕ್ಷ್ಮೀ ರೈ. ವಿಶೇಷವಾದ ಕತೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ಆ ನಿಟ್ಟಿನಲ್ಲಿ ನನಗೆ ಸಿಕ್ಕ ಒಳ್ಳೆಯ ಸಿನಿಮಾ ಝಾನ್ಸಿ. ಹೆಸರಿನಲ್ಲಿ ಒಂದು ಫೋರ್ಸ್ ಇದೆ. ಆ್ಯಕ್ಷನ್ ಸಿನಿಮಾ. ನಿರ್ದೇಶಕರು ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ’ ಎಂದರು ಲಕ್ಷ್ಮೀ ರೈ. ಬಾಂಬೆ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ