ಸಲ್ಮಾನ್ ಅವರ "ಟೈಗರ್ ಜಿಂದಾ ಹೈ" ಸಿನಿಮಾದಲ್ಲಿ ಸುದೀಪ್ ವಿಲನ್ ಕ್ಯಾರೆಕ್ಟರ್ ಅಭಿನಯಿಸಲು ಆಫರ್ ಬಂದಿದೆಯಂತೆ.

ಬೆಂಗಳೂರು(ಮಾ. 17): ಕಿಚ್ಚ ಸುದೀಪ್ ಬರುವ ಮುನ್ನ, ಕನ್ನಡ ಚಿತ್ರರಂಗದ ನಾಯಕನಟನೊಬ್ಬ ಬೇರೆ ಚಿತ್ರರಂಗಗಳಲ್ಲಿ ಯಶಸ್ಸು ಗಳಿಸುತ್ತಾರೆ ಎಂಬುದನ್ನು ಕನಸಿನಲ್ಲೂ ಊಹಿಸಲು ಸಾಧ್ಯವಿರಲಿಲ್ಲ. ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸುದೀಪ್ ತಮ್ಮದೇ ಛಾಪು ಮೂಡಿಸಿದ್ದಾರೆ. ಟಾಲಿವುಡ್'ನಲ್ಲೂ ಅವರು ನಟಿಸಿದ್ದಾರೆ. ರಾಮಗೋಪಾಲ್ ವರ್ಮಾ, ರಾಜಮೌಳಿಯಂಥ ಘಟಾನುಘಟಿ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಅಮಿತಾಭ್ ಬಚ್ಚನ್, ಸೂರ್ಯ, ವಿಜಯ್ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ. "ಫೂಂಕ್", "ರಣ್", "ಈಗಾ", "ಬಾಹುಬಲಿ", "ರಕ್ತ ಚರಿತ" ಮೊದಲಾದ ಸೂಪರ್'ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ನಮ್ಮ ಅಭಿನಯ ಚಕ್ರವರ್ತಿ ಸುದೀಪ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ ಇನ್ನಷ್ಟು ಕಿಚ್ಚು ಹಚ್ಚುವ ಬೆಳವಣಿಗೆ ಆಗುತ್ತಿದೆ. ಹಿಂದಿಯ ಖಾನ್'ದಾನ್ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲು ಆಫರ್ ಬಂದಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸಲ್ಮಾನ್ ಅವರ "ಟೈಗರ್ ಜಿಂದಾ ಹೈ" ಸಿನಿಮಾದಲ್ಲಿ ಸುದೀಪ್ ವಿಲನ್ ಕ್ಯಾರೆಕ್ಟರ್ ಅಭಿನಯಿಸಲು ಆಫರ್ ಬಂದಿದೆಯಂತೆ. ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆ ಚಿತ್ರದಲ್ಲಿ ಸುದೀಪ್ ಅವರು ಐಎಸ್'ಐ ಏಜೆಂಟ್'ನ ಪಾತ್ರ ಮಾಡಬೇಕಾಗುತ್ತದಂತೆ. ಆದರೆ, ಸುದೀಪ್ ಎಲ್ಲಿಯೂ ಈ ಕುರಿತು ಸ್ಪಷ್ಟನೆ ನೀಡಿಲ್ಲ.

ಅಂದಹಾಗೆ, ಕನ್ನಡದ ಬಿಗ್'ಬಾಸ್ ರಿಯಾಲಿಟಿ ಶೋಗೆ ಸುದೀಪ್ ಅವರನ್ನು ಆಯ್ಕೆ ಮಾಡಲು ಶಿಫಾರಸು ಮಾಡಿದ್ದು ಇದೇ ಸಲ್ಲು ಭಾಯ್ ಅವರೇ. ಇವರಿಬ್ಬರ ಗೆಳೆತನ ವರ್ಷಗಳದ್ದು. ಸಲ್ಮಾನ್ ಕೊಟ್ಟ ಆಫರ್'ನ್ನು ಕಿಚ್ಚ ಒಪ್ಪಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

ತಮಿಳಿಗೆ ಹೆಬ್ಬುಲಿ:
ಇದೇ ವೇಳೆ, ರಾಜ್ಯದಲ್ಲಿ ಭರ್ಜರಿ ಯಶಸ್ಸು ಕಂಡು ಗಲ್ಲಾಪೆಟ್ಟಿಗೆ ದಾಖಲೆಯತ್ತ ಮುನ್ನಗ್ಗುತ್ತಿರುವ ಸುದೀಪ್ ಅಭಿನಯದ "ಹೆಬ್ಬುಲಿ" ಚಿತ್ರ ತಮಿಳಿಗೆ ರೀಮೇಕ್ ಆಗುವ ಸುದ್ದಿ ಎರಡು ವಾರದಿಂದ ಹರಿದಾಡುತ್ತಿದೆ. ಸಿಂಗಂ ಖ್ಯಾತಿಯ ಸೂರ್ಯ ಅವರು ತಮಿಳಿನ ಹೆಬ್ಬುಲಿ ರೀಮೇಕ್'ನಲ್ಲಿ ನಟಿಸಲಿದ್ದಾರಂತೆ.