Asianet Suvarna News Asianet Suvarna News

ಕೆಜಿಎಫ್ ಯಾವಾಗ ಬಿಡುಗಡೆ? ಏನ್ ಕತೆ? ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್

ಕೆಜಿಎಫ್ ಯಾವಾಗ ಬಿಡುಗಡೆ, ಏನು ಅದರ ಕತೆ, ಯಾರ ಕತೆ ಅದು, ಕೆಜಿಎಫ್‌ಗೂ ಕತೆಗೂ ಏನು ಸಂಬಂಧ? ಮೊದಲ ಬಾರಿಗೆ ನಿರ್ದೇಶಕ ಪ್ರಶಾಂತ್  ನೀಲ್ ಬಾಯ್ತುಂಬ ಮಾತಾಡಿದ್ದಾರೆ. ಚಿತ್ರದ ಕತೆ, ಚಿತ್ರಕತೆ, ಸೆಟ್ ಎಲ್ಲವನ್ನೂ ನಿಭಾಯಿಸುತ್ತಾ ಅದು ತನ್ನ ಹೋಮ್‌ಬ್ಯಾನರ್ ಸಿನಿಮಾವೇನೋ  ಎಂಬಂತೆ ಆಸಕ್ತಿ ತೋರುತ್ತಿರುವ ಯಶ್ ಗುಣಗಾನ ಮಾಡಿದ್ದಾರೆ.

KGF Film Director Exclusive talk with Kannada Prabha

ಕೆಜಿಎಫ್ ಯಾವಾಗ ಬಿಡುಗಡೆ, ಏನು ಅದರ ಕತೆ, ಯಾರ ಕತೆ ಅದು, ಕೆಜಿಎಫ್‌ಗೂ ಕತೆಗೂ ಏನು ಸಂಬಂಧ? ಮೊದಲ ಬಾರಿಗೆ ನಿರ್ದೇಶಕ ಪ್ರಶಾಂತ್  ನೀಲ್ ಬಾಯ್ತುಂಬ ಮಾತಾಡಿದ್ದಾರೆ. ಚಿತ್ರದ ಕತೆ, ಚಿತ್ರಕತೆ, ಸೆಟ್ ಎಲ್ಲವನ್ನೂ ನಿಭಾಯಿಸುತ್ತಾ ಅದು ತನ್ನ ಹೋಮ್‌ಬ್ಯಾನರ್ ಸಿನಿಮಾವೇನೋ  ಎಂಬಂತೆ ಆಸಕ್ತಿ ತೋರುತ್ತಿರುವ ಯಶ್ ಗುಣಗಾನ ಮಾಡಿದ್ದಾರೆ.

ಕೆಜಿಎಫ್ ಅಂದರೇನು?
ಇದೊಂದು ಪೀರಿಯಾಡಿಕ್ ಸಿನಿಮಾ. 70 ಮತ್ತು 80 ದಶಕದೊಳಗಿನ ಕತೆ. ಚಿತ್ರದ ಟೈಟಲ್ ಹಾಗೂ ಪೋಸ್ಟರ್ ನೋಡಿದವರೆಲ್ಲ ‘ಇದೇನು ಕೆಜಿಎಫ್ ಅಂಡರ್‌ವರ್ಲ್ಡ್ ಜಗತ್ತಿನ ಸಿನಿಮಾನಾ?’ ಅಂತ ಕೇಳಿದ್ದುಂಟು.
ಜತೆಗೆ, ಯಾವುದೋ ವ್ಯಕ್ತಿಗೆ ಸಂಬಂಧಿಸಿದ ಚಿತ್ರವಿರಬಹುದು ಎನ್ನುವ  ಮಾತುಗಳು ಕೇಳಿಬಂದಿವೆ. ಇವೆಲ್ಲ ಕಲ್ಪನೆ ಮಾತ್ರ. ಯಾಕಂದ್ರೆ, ಇದು ಬೇರೆ ಯಾವುದೇ ಸಿನಿಮಾ. ನನ್ನದೇ ಕಲ್ಪನೆಯಲ್ಲಿ ರೂಪು ತಾಳಿದ ಒಬ್ಬ ವ್ಯಕ್ತಿಯ ಕತೆ. ಪೋಸ್ಟರ್ ಹಾಗೂ ಟೀಸರ್‌ನಲ್ಲಿ ನೋಡಿದ ಹಾಗೆ ಅಂಡರ್‌ವರ್ಲ್ಡ್ ಛಾಯೆ ಕತೆಯಲ್ಲಿದ್ದರೂ ಅದು ಕೆಜಿಎಫ್‌ಗೆ ಸಂಬಂಧಿಸಿದ್ದಲ್ಲ. ಅಷ್ಟೇ ಅಲ್ಲ, ಚಿತ್ರದ ಕತೆ ಯಾವುದೇ ಪ್ರದೇಶಕ್ಕೂ ಅನ್ವಯವಾಗುವಂಥದ್ದು ಅನ್ನೋದೇ ವಿಶೇಷ.

ಅಂದರೆ, ಕೆಜಿಎಫ್ ಟೈಟಲ್‌ಗೂ ಸಿನಿಮಾಕ್ಕೂ ಏನ್ ಸಂಬಂಧ ಇಲ್ವಾ?
ಕತೆಗೂ ಅದಕ್ಕೂ ಲಿಂಕ್ ಇದೆ. ಅದೇನು ಅನ್ನೋದು ಚಿತ್ರ ನೋಡಿದಾಗಲೇ ಗೊತ್ತಾಗುತ್ತೆ. ಅಷ್ಟು ಮಾತ್ರ ಹೇಳಬಹುದು.

ಅಂಡರ್‌ವರ್ಲ್ಡ್ ಸಿನಿಮಾ ಅನ್ನೋ ಮಾತಿದೆಯಲ್ಲ!
ಇದೊಂದು ಕ್ಲಾಸ್ ಮತ್ತು ಮಾಸ್ ಸಿನಿಮಾ. ಎರಡು ವರ್ಗಕ್ಕೂ ಇಷ್ಟವಾಗುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಆ್ಯಕ್ಷನ್, ರೊಮಾನ್ಸ್ ಜತೆಗೆ ತಾಯಿ-ಮಗನ ಸೆಂಟಿಮೆಂಟ್ ಈ ಚಿತ್ರದ ಹೈಲೈಟ್. ಒಂದು ಕಮರ್ಷಿಯಲ್ ಸಿನಿಮಾ ಅಂದಾಗ ಇರಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ. ಹಾಗಂತ ಯಾವುದನ್ನೂ ವೈಭವೀಕರಿಸಿಲ್ಲ. ಯಾವುದರ ಛಾಯೆಯೂ ಇಲ್ಲ. ಎಲ್ಲೂ ಕಾಣದ ಒಂದು ಪಾತ್ರವನ್ನು ನೀವು ಹೇಗೆ ನೋಡಲು ಸಾಧ್ಯವೋ
ಹಾಗೆಯೇ ನವೀನವಾದದ್ದು ಮತ್ತು ಅಷ್ಟೇ ವಿಭಿನ್ನ ಎನಿಸಿದ್ದು ಎನಿಸುವ ಹಲವು ಸಂಗತಿಗಳು ಇಲ್ಲಿವೆ.
 

ಈ ಕತೆಗೆ ಸ್ಪೂರ್ತಿ ಯಾರು?
ಆ ಬಗ್ಗೆ ನಾನು ಈಗಲೇ ನಾನು ಏನನ್ನು ಹೇಳೋದಿಲ್ಲ. ಯಾಕಂದ್ರೆ, ಕತೆ ಬರೆಯುವಾಗ ನನ್ನ ತಲೆಯಲ್ಲಿ ಯಾವುದೇ ವ್ಯಕ್ತಿಯ ಚಿತ್ರಣವೂ ಇರಲಿಲ್ಲ. ನಾನೇನು ಕಲ್ಪನೆ ಮಾಡಿಕೊಂಡಿದ್ದೆನೋ ಆ ಪ್ರಕಾರ ಆ ಪಾತ್ರ ಮತ್ತು ಕತೆ ಸೃಷ್ಟಿ ಆಗಿದೆ. ಅದು ತೆರೆ ಮೇಲೆ ಬಂದಾಗ ಆ ಕತೆ ಇನ್ನಾವುದೋ ವ್ಯಕ್ತಿಗೆ ಹೋಲಿಕೆಯಾದರೆ ಅದಕ್ಕೆ ನಾನು ಕಾರಣ ಅಲ್ಲ. ಅದು ಅವರವರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟಿದ್ದು. ಪ್ರಶಾಂತ್ ನೀಲ್ ತೆರೆದಿಟ್ಟ  ಸೀಕ್ರೆಟ್ !

ಬಹುಭಾಷೆಗಳಲ್ಲಿ ಈ ಸಿನಿಮಾ ಬರ್ತಿರೋದಕ್ಕೆ ಕಾರಣ ಏನು?
ಮೊದಲು ಕತೆ. ಅದೊಂದು ಯೂನಿವರ್ಸಲ್ ಸಬ್ಜೆಕ್ಟ್. ಅದರ ಜತೆಗೆ ಮೇಕಿಂಗ್ ಶೈಲಿ. ಈವರೆಗಿನ ಮೇಕಿಂಗ್ ನೋಡಿದ್ರೆ ಹಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ ಅನ್ನೋ ಮಾತು ಚಿತ್ರ ತಂಡದಿಂದ ಕೇಳಿ
ಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಆ ಮಟ್ಟಿಗೆ ದೊಡ್ಡ ಮಟ್ಟದ ಬಂಡವಾಳ ಹಾಕಿದ್ದಾರೆ. ಇನ್ನೂ ಶೂಟಿಂಗ್ ಬಾಕಿಯಿದೆ. ಅದನ್ನು ಅಷ್ಟೇ ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆದಿದೆ. ಕನ್ನಡದ ಮಟ್ಟಿಗೆ ಇದು ಬಿಗ್‌ ಬಜೆಟ್ ಸಿನಿಮಾ ಅನ್ನೋದು ಮೇಕಿಂಗ್ ನೋಡಿದ್ರೆ ಗೊತ್ತಾಗುತ್ತೆ.

ಮೇಕಿಂಗ್ ನೋಡಿದವರು ಉಗ್ರಂ ಶೈಲಿಯಲ್ಲಿದೆ ಅಂತಾರಲ್ಲ!
ಹಾಗೆ ಮಾತನಾಡುವವರಿಗೆ ನಾನೊಂದು ಗ್ಯಾರಂಟಿ ಕೊಡುತ್ತೇನೆ, ‘ಉಗ್ರಂ’ ಚಿತ್ರಕ್ಕೂ ಇದಕ್ಕೂ ಕೂದಲೆಳೆಯಷ್ಟು ಲಿಂಕ್ ಇಲ್ಲ. ಅದೇ ಬೇರೆ, ಇದೇ ಬೇರೆ. ನಾವು ಕೂಡ ಮನುಷ್ಯರೇ. ಬಹುದೊಡ್ಡ ಪರಿಣಿತರಲ್ಲ. ಕೆಲವೊಂದು ಛಾಯೆ ನಮಗೆ ಗೊತ್ತಿಲ್ಲದೆ ಕಾಣಿಸಿಕೊಂಡ ತಕ್ಷಣ ಅದು ಇನ್ನೊಂದರ ಕಾಪಿ ಅಥವಾ ಮುಂದುವರೆದ ಭಾಗ ಅಂತೇಳಿ, ಟೀಕಿಸುವುದು, ಟಿಪ್ಪಣಿ ಮಾಡುವುದು ತುಂಬಾ ಸುಲಭ. ಮೇಕಿಂಗ್ ಹಂತದಲ್ಲಿ ಒಂದು ಚಿತ್ರತಂಡದ ಶ್ರಮಕ್ಕೆ ಬೆಲೆ ಕಟ್ಟಲಾಗದು. ಎಚ್ಚರ ತಪ್ಪಿದರೆ ಅಪಾಯಗಳು ಇರುತ್ತವೆ. ಅವೆಲ್ಲ ಸವಾಲುಗಳ ನಡುವೆ ನಮ್ಮ ಕಲ್ಪನೆಯ ಕತೆಗೆ ಜೀವ ತುಂಬಬೇಕಾಗುತ್ತದೆ.

ಯಶ್ ಸಿನಿ ಜರ್ನಿಯ ಬಹುಮುಖ್ಯ ಸಿನಿಮಾ ಇದು ಎಂಬಂತೆ ಬಿಂಬಿಸಲಾಗುತ್ತಿದೆಯಲ್ಲ?
ಅಭಿಮಾನಿಗಳು ಹಾಗೆ ಅಂದುಕೊಂಡಿದ್ದಾರೆ. ಅದಕ್ಕೆ ಕಾರಣ ನಾವಲ್ಲ, ಯಶ್. ಈ ಸಿನಿಮಾವನ್ನು ಅವರು ಹೋಂ ಬ್ಯಾನರ್ ಸಿನಿಮಾ ಎನ್ನುವ ಹಾಗೆ ಪ್ರೀತಿಸಿ, ಕಾಳಜಿ ವಹಿಸಿ ಅಭಿನಯಿ
ಸುತ್ತಿದ್ದಾರೆ. ಸೆಟ್‌ನಲ್ಲಿ ತಾವೊಬ್ಬ ಸ್ಟಾರ್ ನಟ ಎನ್ನುವ ಆ್ಯಟಿಟ್ಯೂಡ್ ತೋರಿಸಿಲ್ಲ. ಕತೆ, ಚಿತ್ರಕತೆ ಜತೆಗೆ ಸಂಭಾಷಣೆ ಹೀಗೆ ಇದ್ದರೆ ಚೆನ್ನ ಎನ್ನುವುದರಿಂದ
ಹಿಡಿದು, ಸೆಟ್ ಹೀಗೆ ಹಾಕಿದರೆ ಚೆನ್ನಾಗಿರುತ್ತೆ  ಎನ್ನುವಷ್ಟರ ಮಟ್ಟಿಗೆ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾಯಕಿ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್,
ಅಚ್ಯುತ್ ಕುಮಾರ್, ವಶಿಷ್ಠ ಸಿಂಹ, ನಾಜರ್ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅವರೆಲ್ಲ ಸಹಕಾರ ಮರೆಯಲಾಗದು.

ಕೆಜಿಎಫ್ ರಿಲೀಸ್ ಯಾವಾಗ?
ಕೆಲವರು ಸಿನಿಮಾ ಇಷ್ಟರಲ್ಲಿಯೇ ತೆರೆಗೆ ಬರಬೇಕಿತ್ತು ಅಂತಲೂ ಹೇಳುತ್ತಾರೆ. ಆದರೆ, ನಮಗೆ ಆ ರೀತಿಯ ಅವಸರ ಇಲ್ಲ. ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ನಾವು ಸಿನಿಮಾವನ್ನು ತೆರೆಗೆ ತರಬೇಕಿದೆ. ಗುಣಮಟ್ಟದ
ಸಿನಿಮಾ ಕೊಡಬೇಕು ಅನ್ನೋದು ನನ್ನ ಕೆಲಸ. ಇನ್ನೇನು ಶೇಕಡ 10 ರಿಂದ 15  ರಷ್ಟು ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಮಾರ್ಚ್ ಮೊದಲ ವಾರದ ಹೊತ್ತಿಗೆ ಅದು ಕಂಪ್ಲೀಟ್ ಆಗಲಿದೆ. ಆನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ
ಶುರುವಾಗುತ್ತೆ. ಆ ಹೊತ್ತಿಗೆ ಎಲೆಕ್ಷನ್ ಬರುವುದು ಖಚಿತ. ಅದೆಲ್ಲ ಮುಗಿದ ನಂತರವೇ ಚಿತ್ರ ತೆರೆ ಕಾಣುವ ಸಾಧ್ಯತೆಗಳಿವೆ. ಎಪ್ರಿಲ್, ಮೇ ಸಮಯ ಕೆಜಿಎಫ್ ತೆರೆ ಕಾಣಲಿದೆ.

ಹೆಚ್ಚು ಕಡಿಮೆ ಒಂದು ವರ್ಷ, ಇಷ್ಟು ಸಮಯ ತಡವಾಯಿತು ಅಂತನಿಸೋದಿಲ್ವಾ?
ಪ್ರತಿಯೊಂದನ್ನು ತುಂಬಾ ಎಚ್ಚರಿಕೆಯಿಂದ ತೆರೆಗೆ ತರುವಾಗ ಈ ಸಮಯ ಬೇಕು ಅನಿಸುತ್ತೆ. ಯಾಕಂದ್ರೆ ಕತೆಯೇ ಹಾಗಿದೆ. ಅದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಂಡು ಚಿತ್ರೀಕರಿಸುತ್ತಿದ್ದೇವೆ. ಸೆಟ್
ಹಾಕುವುದಕ್ಕಾಗಿಯೇ ಒಂದಷ್ಟು ಸಮಯ ಕಳೆದಿದೆ. ಜತೆಗೆ ಇದೊಂದು ಅದ್ಧೂರಿ ವೆಚ್ಚದ ಸಿನಿಮಾ. ನಿರ್ಮಾಪಕರು ನಮ್ಮ ಮೇಲೆ ವಿಶ್ವಾಸವಿಟ್ಟು, ಕತೆಗೆ ತಕ್ಕಂತೆ ದೊಡ್ಡ ಮಟ್ಟದ ಬಂಡವಾಳ ಹೂಡಿದ್ದಾರೆ. ಅವರು ನಮ್ಮ
ಮೇಲಿಟ್ಟಿರುವ ವಿಶ್ವಾಸ ಹುಸಿ ಆಗದಂತೆ ನೋಡಿಕೊಳ್ಳಬೇಕಾದರೆ, ಅಷ್ಟೇ ಎಚ್ಚರಿಕೆಯಿಂದ ಸಿನಿಮಾ ಮಾಡುವುದು ನಮ್ಮ ಕೆಲಸ. ಅಷ್ಟೇ ಅಲ್ಲ, ಅರ್ಜೆಂಟ್ ಬೇಡ, ಎಲ್ಲವೂ ಅಚ್ಚುಕಟ್ಟಾಗಿ ಬರಲಿ, ಕ್ವಾಲಿಟಿ ಇಂಟರ್
ನ್ಯಾಷನಲ್ ಗ್ರೇಡ್‌ನಲ್ಲಿರಲಿ ಅಂತ ನಿರ್ಮಾಪಕರೇ ಹೇಳುವಾಗ ಅರ್ಜೆಂಟ್ ಮಾಡುವ ಅಗತ್ಯ ನಮಗಿಲ್ಲ

ಸಂದರ್ಶನ: ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios