ವರಮಹಾಲಕ್ಷ್ಮಿ ಹಬ್ಬಕ್ಕೂ ಮೊದಲೇ ಕುರುಕ್ಷೇತ್ರ ತೆರೆಗೆ!
ಬಹು ನಿರೀಕ್ಷೆಯ ಹಾಗೂ ಬಹುಭಾಷೆಯ ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಯ ದಿನಾಂಕ ಪಕ್ಕಾ ಆಗಿದೆ. ಆಗಸ್ಟ್ 2ಕ್ಕೆ ತೆರೆ ಮೇಲೆ ಅದ್ದೂರಿಯಾಗಿ ಈ ಸಿನಿಮಾ ಮೂಡುತ್ತಿದೆ. ಆ ಮೂಲಕ ಚಿತ್ರದ ಬಿಡುಗಡೆಯ ದಿನಾಂಕದ ಗೊಂದಲಗಳಿಗೆ ವಿತರಕ ರಾಕ್ಲೈನ್ ವೆಂಕಟೇಶ್ ತೆರೆ ಎಳೆದಿದ್ದಾರೆ.
ಅಂಬರೀಶ್, ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ನಿಖಿಲ್ ಕುಮಾರ್, ರವಿಶಂಕರ್, ಸಾಯಿಕುಮಾರ್, ಶಶಿಕುಮಾರ್, ಸ್ನೇಹ, ಮೇಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಹೀಗೆ ಬಹು ತಾರಾಗಣವನ್ನು ಒಳಗೊಂಡಿರುವ ಹಾಗೂ ನಾಗಣ್ಣ ನಿರ್ದೇಶನದ, ಮುನಿರತ್ನ ನಿರ್ಮಾಣದ ಈ ಚಿತ್ರವನ್ನು ಸಾಕಷ್ಟುದೊಡ್ಡ ಮಟ್ಟದಲ್ಲೇ ತೆರೆಗೆ ತರಲಾಗುತ್ತಿದೆ.
ಒಂದು ಅದ್ಭುತವಾದ ಹಾಗೂ ಬಹು ನಿರೀಕ್ಷೆಯ ಚಿತ್ರವನ್ನು ನಮ್ಮ ಬ್ಯಾನರ್ ಮೂಲಕ ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿ ಇದೆ. ಈಗ ನಮಗೆ ಸಿಕ್ಕಿರುವ ಚಿತ್ರಮಂದಿರಗಳ ಸಂಖ್ಯೆಯೇ ಒಂದು ಸಾವಿರ ದಾಟಿದೆ. ಮುಂದೆ ಮತ್ತಷ್ಟುಚಿತ್ರಮಂದಿರಗಳು ಸಿಗಲಿವೆ. ಭಾರತದಲ್ಲಿ ತೆರೆಕಂಡ ಒಂದು ವಾರದ ನಂತರ ವಿದೇಶಗಳಲ್ಲಿ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದ್ದೇವೆ.- ಯತೀಶ್ ರಾಕ್ಲೈನ್
ಐದು ಭಾಷೆಗಳಲ್ಲಿ ರಾಕ್ಲೈನ್ ಸಾರಥಿ
ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ರಾಕ್ಲೈನ್ ವೆಂಕಟೇಶ್ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತಾವೇ ಮುಂದೆ ನಿಂತು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ರಾಕ್ಲೈನ್ ವೆಂಕಟೇಶ್ ಎಲ್ಲಾ ಭಾಷೆಯ ಚಿತ್ರರಂಗಕ್ಕೆ ಗೊತ್ತಿರುವ ನಿರ್ಮಾಪಕರು. ಹೀಗಾಗಿ ಅವರು ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಚಿತ್ರಕ್ಕೆ ಮತ್ತಷ್ಟುಬಲ ಬಂದಿದೆ. ಸದ್ಯಕ್ಕೆ ಈಗ ಚಿತ್ರಕ್ಕೆ ಚೆನ್ನೈನಲ್ಲಿ 3ಡಿ ಹಾಗೂ 2ಡಿ ಕೆಲಸ ನಡೆಯುತ್ತಿದೆ. ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಕನ್ನಡ ಚಿತ್ರವೊಂದು 3ಡಿ ತಂತ್ರಜ್ಞಾನದಲ್ಲಿ ಬರುತ್ತಿದೆ. ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಈ ಕತೆ 3ಡಿಯಲ್ಲಿ ಬಂದಿಲ್ಲ. ಇದೆಲ್ಲ ಕ್ರೆಡಿಟ್ಟು ನಿರ್ಮಾಪಕ ಮುನಿರತ್ನ ಅವರಿಗೆ ಸೇರಬೇಕು- ನಾಗಣ್ಣ, ನಿರ್ದೇಶಕ
ಒಂದು ಸಾವಿರ ಚಿತ್ರಮಂದಿರಗಳಲ್ಲಿ
ಈಗಾಗಲೇ ದೊಡ್ಡ ಮೊತ್ತಕ್ಕೆ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದ್ದು, ಜುಲೈ 27ರಂದು ಆಡಿಯೋ ಬಿಡುಗಡೆಗೆ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನೂ ಹೊರ ರಾಜ್ಯಗಳ ಭಾಷೆಗಳಲ್ಲಿ 750 ರಿಂದ 800 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಒಟ್ಟು ಒಂದು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.