ದುನಿಯಾ ವಿಜಯ್ ಅವರ ‘ಕುಸ್ತಿ’ ಸಿನಿಮಾ ಕತೆಗೆ ಬಹುಶಃ ಪೂರ್ಣ ವಿರಾಮ ಬಿದ್ದಿದೆ. ಆರಂಭದಲ್ಲೇ ಅಬ್ಬರ ಹುಟ್ಟಿಸಿದ ಸಿನಿಮಾ ಎಲ್ಲಿಯವರೆಗೂ ಬಂದಿದೆ ಎನ್ನುವ ಕುತೂಹಲಕ್ಕೆ ಚಿತ್ರತಂಡದಿಂದ ಯಾವುದೇ ಉತ್ತರ ಸಿಗುತ್ತಿಲ್ಲ. 

ಆದರೆ, ಕೌಟುಂಬಿಕ ಕಲಹಗಳಲ್ಲೇ ಮುಳುಗಿರುವ ವಿಜಯ್ ಅವರ ‘ಕುಸ್ತಿ’ ಕೈಗೂಡುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಸದ್ಯದ ಸುದ್ದಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಪುತ್ರ ಸಾಮ್ರಾಟ್ ವಿಜಯ್‌ನನ್ನು ಪರಿಚಯಿಸುತ್ತಿರುವ, ತಾನೂ ಕೂಡ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವ ‘ಕುಸ್ತಿ’ಗೆ ಸ್ವತಃ ವಿಜಯ್ ಅವರೇ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ‘ಕುಸ್ತಿ’ ಹೆಸರಿನ ಸಿನಿಮಾ ಸದ್ಯಕ್ಕೆ ಸೆಟ್ಟೇರಲ್ಲ. ಹಾಗಾಗಿ ಈ ಚಿತ್ರಕ್ಕಾಗಿ ಅನೇಕ ತಿಂಗಳುಗಳ ಕಾಲ ದುಡಿದ ನಿರ್ದೇಶಕ ರಾಘು ಶಿವಮೊಗ್ಗ ಅವರ ಶ್ರಮ ವ್ಯರ್ಥವಾಗಿದೆ ಎನ್ನುವುದು ಬಲ್ಲ ಮೂಲಗಳ ಸುದ್ದಿ.

ತಮ್ಮದೇ ನಿರ್ಮಾಣದ ಚಿತ್ರವನ್ನು ಸ್ಟಾಪ್ ಮಾಡಿರುವ ವಿಜಯ್, ಮುಂದೆ ಯಾರ ನಿರ್ಮಾಣದ ಚಿತ್ರಕ್ಕೆ ನಾಯಕನಾಗುತ್ತಿದ್ದಾರೆ ಎಂಬುದು ಸದ್ಯ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿಗಳು. ಈಗ ಬಂದಿರುವ ಮಾಹಿತಿಯಂತೆ ‘ಕುಸ್ತಿ’ ಚಿತ್ರವನ್ನು ನಿಲ್ಲಿಸಿರುವ ವಿಜಯ್, ಭೂಗತ ಲೋಕದ ಕತೆಯೊಂದನ್ನು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರಂತ. ಈಗಾಗಲೇ ಅಂಥದ್ದೊಂದು ಕತೆಯ ಹುಡುಕಾಟಕ್ಕಿಳಿದಿರುವ ವಿಜಯ್, ಕತೆಯ ಸಾಲು ಸಿಕ್ಕಿದೆಯಂತೆ. ‘ಕುಸ್ತಿ’ ನಿಲ್ಲಿಸಿರುವ ಕಾರಣ, ರಾಘು ಶಿವಮೊಗ್ಗ ಅವರಿಂದಲೇ ಈ ಹೊಸ ಸಿನಿಮಾ ಮಾಡಿಸುವ ಯೋಚನೆ ವಿಜಯ್ ಅವರದ್ದು. ಅಲ್ಲಿಗೆ ‘ಕುಸ್ತಿ’ ಕೈ ಬಿಟ್ಟರೂ ‘ಚೂರಿಕಟ್ಟೆ’ ನಿರ್ದೇಶಕನನ್ನು ಭೂಗತಲೋಕ ಕತೆ ಕೈ ಹಿಡಿಯಬಹುದೇ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

ಮತ್ತೊಂದು ಮಾಹಿತಿಯ ಪ್ರಕಾರ ಕುಸ್ತಿ ಕೈ ಬಿಟ್ಟ ಮೇಲೆ ರಾಘು ಶಿವಮೊಗ್ಗ ಬೇರೊಂದು ಕತೆ ಮಾಡಿಕೊಂಡು, ಮತ್ತೊಬ್ಬ ಹೀರೋಗಾಗಿ ಕಾಯುತ್ತಿದ್ದಾರಂತೆ. ಇತ್ತ ನಟ ವಿಜಯ್ ಒಂದು ಕೋಟಿ ಬಜೆಟ್ ಒಳಗೆ ಒಂದು ರೆಗ್ಯುಲರ್ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದು, ಇದಕ್ಕೆ ನಿರ್ದೇಶಕ ಯಾರೆಂದು ಪಕ್ಕಾ ಆಗಿಲ್ಲವಂತೆ.

ಕುಸ್ತಿ ಯಾಕೆ ನಿಲ್ಲಿಸಿದ್ದು?

  • ಬಜೆಟ್ ಜಾಸ್ತಿ ಆಗಿ ಅಷ್ಟು ಖರ್ಚು ಮಾಡುವುದಕ್ಕೆ ಧೈರ್ಯ ಸಾಲುತ್ತಿಲ್ಲ.
  • ಈ ಚಿತ್ರದಲ್ಲಿ ವಿಜಯ್ ಪುತ್ರ ಸಾಮ್ರಾಟ್ ವಿಜಯ್ ನಟಿಸುತ್ತಿದ್ದಾರೆ. ಆತನಿಗೆ ಮತ್ತಷ್ಟು ತಯಾರಿ ಬೇಕಿದೆ. ಈ ತಯಾರಿಗೆ ಸಾಕಷ್ಟು ಸಮಯ ಬೇಕು.
  • ಕೌಟುಂಬಿಕ ಕಲಹಗಳಿಂದ ಜರ್ಜರಿತರಾಗಿರುವ ವಿಜಯ್ ‘ಕುಸ್ತಿ’ಯಂತಹ ದೊಡ್ಡ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಆಗುತ್ತಿಲ್ಲ.
  • ಇವು ಚಿತ್ರತಂಡ ಹೇಳುತ್ತಿರುವ ಕಾರಣಗಳಲ್ಲ. ಆದರೆ, ಬಹುತೇಕ ಇದೇ ಕಾರಣಗಳು ‘ಕುಸ್ತಿ’ ಚಿತ್ರವನ್ನು ನಿಲ್ಲಿಸಿದ್ದಾರೆಂಬುದು ಸದ್ಯದ ಸುದ್ದಿ. ಕೌಟುಂಬಿಕ ಕಲಹಗಳು ಹಾಗೂ ಬಜೆಟ್ ಕೊರತೆ ಇವೆರಡೂ ಸೇರಿಕೊಂಡು ಕುಸ್ತಿ ಅಖಾಡಕ್ಕೆ ಬ್ರೇಕ್ ಹಾಕಿವೆಯಂತೆ.