'ಹೊಸಬರು ದಯವಿಟ್ಟು ಸಿನಿಮಾಗೆ ಬರಬೇಡಿ'!
ಇಲ್ಲಿ ಅನುಭವಿ ನಿರ್ಮಾಪಕರೇ ಸಿನಿಮಾ ಮಾಡಿ ಉಳಿಯುವುದು ಕಷ್ಟವಿದೆ. ಅಂಥದ್ದರಲ್ಲಿ ಹೊಸದಾಗಿ ಸಿನಿಮಾ ಮಾಡುತ್ತೇವೆ. ಬಂಡವಾಳ ಹೂಡಿ ಬಂಡವಾಳ ತೆಗೆಯುತ್ತೇವೆ ಅಂತ ಕನಸು ಹೊತ್ತು ಬರಬೇಡಿ. ಇಲ್ಲಿ ಮಾಫಿಯಾವೇ ಇದೆ. ಸಿನಿಮಾ ಮಾಡುವುದಕ್ಕಿಂತ ಯಾವುದಾದರೂ ವ್ಯಾಪಾರ ಮಾಡಿ ಉದ್ಧಾರವಾಗುವುದನ್ನು ನೋಡಿಕೊಳ್ಳಿ.
- ಹೀಗೆ ಹೇಳಿದ್ದು ಪ್ರಸಿದ್ಧ ನಿರ್ಮಾಪಕ ಕೆ. ಮಂಜು.
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಿರೀಕ್ಷೆಯಂತೆ ‘ಪಡ್ಡೆ ಹುಲಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಪಡೆದಿದ್ದಾರೆ. ಆದರೆ ‘ಪಡ್ಡೆ ಹುಲಿ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರದ ಮಾಲೀಕರಿಂದ ಬೆಂಬಲ ಸಿಗದಿರುವುದು ಕೆ. ಮಂಜುಗೆ ತೀವ್ರ ಬೇಸರ ತರಿಸಿದೆ. ಚಿತ್ರದ ಸಕ್ಸಸ್ ಮೀಟ್ನಲ್ಲಿ ಅವರು, ಚಿತ್ರಮಂದಿರದ ಮಾಲೀಕರು ಹಾಗೂ ಮಲ್ಟಿಪ್ಲೆಕ್ಸ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.
ಪಡ್ಡೆಹುಲಿ ಎಂದೇಳಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಶ್ರೇಯಸ್!
‘ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಕಡೆಗಳಲ್ಲೂ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿವೆ. ಕೆಲವು ಕಡೆ ಅಷ್ಟಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ನಿಜ. ಅದಕ್ಕೆ ಕಾರಣ ಐಪಿಎಲ್, ಚುನಾವಣೆ ಇತ್ಯಾದಿ. ಆದರೆ, ಜನ ಬರುತ್ತಿಲ್ಲ ಅಂತ, ಚಿತ್ರಮಂದಿರದ ಮಾಲೀಕರು ಒಂದೆರಡು ದಿನಗಳಲ್ಲೇ ಚಿತ್ರವನ್ನು ಎತ್ತಂಗಡಿ ಮಾಡಲು ಹುನ್ನಾರ ನಡೆಸಿದ್ದಾರೆ. ಹಾಗೆಯೇ ಮಲ್ಟಿಪ್ಲೆಕ್ಸ್ಗಳಲ್ಲೂ ಚಿತ್ರಕ್ಕೆ ಅನ್ಯಾಯವಾಗುತ್ತಿದೆ. ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಬುಕ್ಮೈ ಶೋನಲ್ಲಿ ಚಿತ್ರದ ಬಗ್ಗೆ ಸರಿಯಾದ ರಿವ್ಯೂ ನೀಡಿಲ್ಲ. ಯಾರೋ ಕೆಲವು ವ್ಯಕ್ತಿಗಳು ಸಿನಿಮಾವನ್ನು ದಂಧೆಯಾಗಿಸಿಕೊಂಡಿದ್ದಾರೆ. ಅವರ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸುತ್ತೇನೆ. ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಸಾಮಾನ್ಯ ನಿರ್ಮಾಪಕರಿಗೆ ಆಗುತ್ತಿರುವ ಅನ್ಯಾಯ ಏನೆಂದು ವಿವರಿಸುತ್ತೇನೆ’ ಎಂದು ಗುಡುಗಿದರು.
ಅವರ ಆಕ್ರೋಶದ ಈ ಮಾತುಗಳನ್ನು ಪಕ್ಕದಲ್ಲೇ ಕೂತಿದ್ದ ‘ಪಡ್ಡೆ ಹುಲಿ’ ನಿರ್ಮಾಪಕ ರಮೇಶ್ ರೆಡ್ಡಿ ಏಕಾಗ್ರತೆಯಿಂದ ಕೇಳುತ್ತಿದ್ದರು. ಕೊನೆಗೆ ಮಾತನಾಡಿ, ಮಂಜು ತಮ್ಮ ನೋವು ಹೊರ ಹಾಕುತ್ತಾರೆ, ನಿರ್ದೇಶಕರು ಸಿನಿಮಾ ಹಿಟ್ ಎನ್ನುತ್ತಾರೆ. ಆದರೆ ಕಲೆಕ್ಷನ್ ನೋಡಿದರೆ, ಭಯ ಹುಟ್ಟುತ್ತದೆ ಎನ್ನುತ್ತಾ ಅಲ್ಲಿಂದ ಎದ್ದು ಹೊರಟರು. ನಿರ್ದೇಶಕ ಗುರು ದೇಶಪಾಂಡೆ ನೋಡುತ್ತಿದ್ದರು.