ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದ ಸುದ್ದಿ ನಿಲ್ಲುತ್ತಿಲ್ಲ. ವಿಜಯ್ ಸಿಎಂ ಆದ್ಮೇಲೆ ವಿಶಾಲ್, ಸೂರ್ಯ, ಅಜಿತ್ ಬಳಿಕ ಈಗ ಧನುಷ್ ಹೆಸರು ಕೇಳಿಬರುತ್ತಿದೆ. ಹಾಗಾದ್ರೆ ಧನುಷ್ ರಾಜಕೀಯ ಎಂಟ್ರಿ ಫಿಕ್ಸ್ ಆಯ್ತಾ?
ತಮಿಳುನಾಡು ರಾಜಕೀಯದಲ್ಲಿ ಕಾಲಿವುಡ್ನ ದಳಪತಿ ವಿಜಯ್ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿ ಪಟ್ಟಕ್ಕೇರಿ ವಿಜಯ್ ಹೊಸ ಇತಿಹಾಸ ಬರೆದಿದ್ದಾರೆ. ಕಮಲ್ ಹಾಸನ್ ಅವರಂತಹ ದಿಗ್ಗಜರಿಗೂ ಸಾಧ್ಯವಾಗದ ಈ ರಾಜಕೀಯ ಚಮತ್ಕಾರವನ್ನು ವಿಜಯ್ ಮಾಡಿ ತೋರಿಸಿದ್ದಾರೆ. ಹೀಗಾಗಿ, ಕಾಲಿವುಡ್ನ ಇತರೆ ಸ್ಟಾರ್ ನಟರು ಕೂಡ ಈಗ ರಾಜಕೀಯದತ್ತ ಹೆಜ್ಜೆ ಹಾಕಲು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ವಿಶಾಲ್, ಸೂರ್ಯ, ಅಜಿತ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಈ ಲಿಸ್ಟ್ಗೆ ಸ್ಟಾರ್ ನಟ ಧನುಷ್ ಹೆಸರು ಕೂಡ ಸೇರಿದೆ.
ಕಾಲಿವುಡ್ ಸ್ಟಾರ್ ನಟ ಧನುಷ್ ಕೂಡ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಪ್ರಚಾರ ತಮಿಳುನಾಡಿನಲ್ಲಿ ಜೋರಾಗಿದೆ. ಇತ್ತೀಚೆಗೆ ಧನುಷ್ ಅಭಿಮಾನಿ ಸಂಘ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಅಧಿಕೃತ ಧ್ವಜವನ್ನು ಅನಾವರಣಗೊಳಿಸಿರುವುದು ಹಾಟ್ ಟಾಪಿಕ್ ಆಗಿದೆ. ಕೇವಲ ಧ್ವಜ ಅನಾವರಣಕ್ಕೆ ಸೀಮಿತವಾಗದೆ, ತಮಿಳುನಾಡಿನಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಭಿಮಾನಿ ಸಂಘದ ನಾಯಕರಿಗೆ ಕರೆ ನೀಡಲಾಗಿದೆ. ಇದು ಪಕ್ಕಾ ರಾಜಕೀಯ ಲೆಕ್ಕಾಚಾರದಿಂದಲೇ ನಡೆಯುತ್ತಿದೆ ಎಂದು ವಿಶ್ಲೇಷಕರು ಭಾವಿಸುತ್ತಿದ್ದಾರೆ. ಮಾವ ರಜನಿಕಾಂತ್ ರಾಜಕೀಯಕ್ಕೆ ಬಾರದ ಕಾರಣ, ಆ ಜಾಗವನ್ನು ಧನುಷ್ ತುಂಬಲು ನೋಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿ ವಿಜಯ್ ಅವರ ಹಾದಿಯಲ್ಲೇ ಧನುಷ್ ಕೂಡ ಈಗಿನಿಂದಲೇ ಗ್ರೌಂಡ್ ವರ್ಕ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ಪಕ್ಕಾ ಪ್ಲಾನ್ನೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಕಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಯಶಸ್ಸಿನಿಂದ ಸ್ಫೂರ್ತಿ ಪಡೆದು, ಧನುಷ್ ಅಭಿಮಾನಿಗಳು ಕೂಡ ತಳಮಟ್ಟದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಈ ಧ್ವಜ ಅನಾವರಣ ಕಾರ್ಯಕ್ರಮ ಕೇವಲ ಆರಂಭವಷ್ಟೇ, ಮುಂದೆ ಇನ್ನಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಸಾಲು ಸಾಲು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ
ಒಂದೆಡೆ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ ವಲಯದಲ್ಲಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ, ನಟ ಧನುಷ್ ಕಡೆಯಿಂದಾಗಲಿ ಅಥವಾ ಅವರ ಪಿಆರ್ ಟೀಮ್ನಿಂದಾಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಸಾಲು ಸಾಲು ಕ್ರೇಜಿ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರುವ ಧನುಷ್, ಕೇವಲ ಅಭಿಮಾನಿ ಸಂಘದ ಗುರುತಿಗಾಗಿ ಈ ಧ್ವಜಕ್ಕೆ ಅನುಮತಿ ನೀಡಿದ್ದಾರಾ, ಅಥವಾ ಇದರ ಹಿಂದೆ ದೀರ್ಘಕಾಲದ ರಾಜಕೀಯ ತಂತ್ರವಿದೆಯೇ ಎಂಬುದು ತಿಳಿಯಬೇಕಿದೆ. ಈ ಸಸ್ಪೆನ್ಸ್ಗೆ ತೆರೆ ಬೀಳಬೇಕಾದರೆ, ಸ್ವತಃ ಧನುಷ್ ಅವರೇ ಪ್ರತಿಕ್ರಿಯಿಸುವವರೆಗೆ ಕಾಯಲೇಬೇಕು.


