ತಾರಕಾಸುರ ಸಿನ್ಮಾ ಬ್ಯಾನ್ ಆಗ್ಬೇಕಿತ್ತು: ಚಂದ್ರಶೇಖರ್ ಬಂಡಿಯಪ್ಪ
ಕೊಂಚ ಯಾಮಾರಿದ್ರುನೂ ನನ್ನ ನಿರ್ದೇಶನದ ಈ ಸಿನಿಮಾ ಬ್ಯಾನ್ ಆಗುತ್ತಿತ್ತು...
- ಹೀಗೆ ಹೇಳಿಕೊಂಡಿದ್ದು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಅವರಿಗೆ ಹೀಗೆ ಬ್ಯಾನ್ ಭಯ ಕಾಡಿದ್ದು ‘ತಾರಕಾಸುರ’ ಚಿತ್ರಕ್ಕ. ಇಷ್ಟಕ್ಕೂ ಯಾಕೆ ಈ ಸಿನಿಮಾ ಬ್ಯಾನ್ ಭಯದಲ್ಲಿತ್ತು? ಅಂಥ ಕತೆ ಏನಿದೆ
ಇದೇ ತಿಂಗಳ ಮೂರನೇ ವಾರದಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ವೈಭವ್ ನಾಯಕನಾಗಿ, ಮಾನ್ವಿತಾ ಹರೀಶ್ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ನರಸಿಂಹಲು ನಿರ್ಮಿಸಿದ್ದಾರೆ.
ಬ್ಯಾನ್ ವಿಚಾರಕ್ಕೆ ಬರುವುದಾದರೆ ಮೊದಲ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯೇ ಈ ಚಿತ್ರಕ್ಕೆ ಅಕ್ಷೇಪ ವ್ಯಕ್ತಪಡಿಸಿತಂತೆ. ಒಂದು ವೇಳೆ ಸೆನ್ಸಾರ್ ಮಂಡಳಿಗೆ ಸೂಕ್ತ ರೀತಿಯಲ್ಲಿ ಉತ್ತರ ಕೊಡದೆ ಹೋಗಿದ್ದರೆ ‘ತಾರಕಾಸುರ’ ಸಿನಿಮಾ ತೆರೆ ಕಾಣುತ್ತಿರಲಿಲ್ಲ ಎನ್ನುವ ಅಚ್ಚರಿ ವಿಷಯವನ್ನು ಹೇಳಿಕೊಂಡಿದ್ದು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರೇ. ಸಿನಿಮಾ ನೋಡಿದ ಮೇಲೆ ಸೆನ್ಸಾರ್ ಮಂಡಳಿ ಏನೆಲ್ಲ ಪ್ರಶ್ನೆಗಳನ್ನು ಕೇಳಬಹುದು ಎಂದು ಮೊದಲ ಒಂದಿಷ್ಟು ತಯಾರಿ ಮಾಡಿಕೊಂಡು, ಜತೆಗೆ ಸೆನ್ಸಾರ್ ನೀತಿಯಗಳನ್ನು ಓದಿಕೊಂಡು ಹೋದ ಚಂದ್ರಶೇಖರ್ ಬಂಡಿಯಪ್ಪ ಅವರಿಗೆ ಸೆನ್ಸಾರ್ ಕೇಳಿದ್ದು ಒಟ್ಟು ಹತ್ತು ಪ್ರಶ್ನೆಗಳು. ಒಂದೊಂದು ಪ್ರಶ್ನೆಗೂ ಸಮರ್ಥವಾಗಿ ಉತ್ತರಿಸಿದ್ದು ಮಾತ್ರವಲ್ಲದೆ, ತಾವೇ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ತಾವು ಆಯ್ಕೆ ಮಾಡಿಕೊಂಡಿದ್ದ ಕತೆ ಎಷ್ಟು ಸಮಂಜಸ ಎಂಬುದನ್ನು ತೋರಿಸಿದ್ದಾರೆ.
ಸಾಮಾನ್ಯವಾಗಿ ಸಿನಿಮಾಗಳ ಬಗ್ಗೆ ಸೆನ್ಸಾರ್ ಮಂಡಳಿ ಅಕ್ಷೇಪ ಎತ್ತಿದರೆ, ಎ ಸರ್ಟಿಪಿಕೆಟ್ ಕೊಟ್ಟರೆ ಏಕಾಏಕಿ ಸಿಟ್ಟಾಗಿ ಮಾಧ್ಯಮಗಳ ಮುಂದೆ ಬರುವವರೆ ಹೆಚ್ಚು. ಆದರೆ, ನಾನು ಆ ಕೆಲಸ ಮಾಡಲಿಲ್ಲ. ಅವರ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಿಸಬೇಕು, ಜತೆಗೆ ನಾನು ತಾರಕಾಸುರ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿರುವುದೇನು ಎಂಬುದನ್ನು ತಿಳಿ ಹೇಳುವುದು ಹೇಗೆಂಬ ತಯಾರಿ ಮಾಡಿಕೊಂಡು ಹೋದೆ. ಹೀಗಾಗಿ ನಮ್ಮ ಚಿತ್ರದ ನಿರ್ಮಾಪಕರೇ ಸಿನಿಮ ಬ್ಯಾನ್ ಮಾಡುತ್ತಾರೆ ಎಂದು ಭಯದಲ್ಲಿದ್ದರು. ಅಂಥ ಚಿತ್ರವನ್ನು ಬಚಾವ್ ಮಾಡಿಕೊಂಡೆ ಎನ್ನುತ್ತಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ನಟ ಧನಂಜಯ್. ಅದನ್ನು ನೋಡಿ ಮೆಚ್ಚಿಕೊಂಡಿದ್ದು ನಟ ಶಿವರಾಜ್ ಕುಮಾರ್, ಸೂರಿ, ನಿರ್ದೇಶಕ ಸಂತೋಷ್ ಆನಂದ್ ರಾಮ್.
ಅಂದಹಾಗೆ ಈ ಚಿತ್ರದ ಕತೆ ಏನು? ಜಾನಪದ ಕಲೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಕತೆ. ಕತ್ತಲ ಜಗತ್ತಿನ ಮತ್ತೊಂದು ಡಾರ್ಕ್ ಸ್ಟೋರಿಗೆ ಬೆಳಕು ಚೆಲ್ಲಿದ್ದಾರೆ ನಿರ್ದೇಶಕರು. ಹೌದು, ಬುಡುಬುಡಿಕೆ ಹೇಳುವವರು ಈಗ ನಶಿಸುತ್ತಿದ್ದಾರೆ. ಆದರೆ ಅದೊಂದು ಅದ್ಭುತ ಕಲೆ. ಪಾವಗಡ, ಮಂಡ್ಯದ ಭಾಗಗಳಲ್ಲಿ ಸಂಚರಿಸಿ ಈ ಬುಡುಬುಡಿಕೆಯವರ ಕತೆಗಳನ್ನು ಅಧ್ಯಯನ ಮಾಡಿ ಅಲ್ಲಿ ನಡೆಯುವ ಕತೆಗಳನ್ನೇ ತಾರಕಾಸುರ ಮೂಲಕ ಹೇಳಲಾಗಿದೆ. ಹೀಗೆ ಹೇಳುವ ಪ್ರಯತ್ನದಲ್ಲಿ ಆ ಜನರ ಕತ್ತಲ ಬದುಕನ್ನೂ ಹೇಳಿದ್ದಾರೆ. ಹೀಗಾಗಿ ಸಿನಿಮಾ ಬ್ಯಾನ್ ಹಂತಕ್ಕೆ ಹೋಗಿತ್ತು ಎಂಬುದು ನಿರ್ದೇಶಕರ ಮಾತು. ಸಮಾಜದಲ್ಲಿ ತುಳಿತಕ್ಕೊಳಗಾದವರ ಈ ಕತೆ ಬೇರೆ ಬೇರೆ ಶೇಡ್ನಲ್ಲಿ ಬಿಚ್ಚಿಕೊಳ್ಳುತ್ತದಂತೆ.