ದಲಿತರನ್ನು ನಿಂದಿಸುವ ಗಾದೆ ಹೇಳಿದ್ದ ನಟ ಉಪೇಂದ್ರನ ವಿರುದ್ಧ, ಬ್ರಾಹ್ಮಣ ಅಧಿಕಾರಿಯಿಂದಲೇ ಎಫ್ಐಆರ್ ದಾಖಲು..
ಸ್ಯಾಂಡಲ್ವುಡ್ ನಟ ಉಪೇಂದ್ರ ದಲಿತ ವಿರೋಧ ಹೇಳಿಕೆ ನೀಡದ್ದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಸಮಾಜ ಕಲ್ಯಾಣ ಅಧಿಕಾರಿ ಬ್ರಾಹ್ಮಣ ಸಮುದಾಯದವರು ಆಗಿದ್ದಾರೆ.
ಬೆಂಗಳೂರು (ಆ.17): ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸ್ಯಾಂಡಲ್ವುಡ್ ಸ್ಟಾರ್ ನಟ ಮತ್ತು ನಿರ್ದೇಶಕ ಉಪೇಂದ್ರ ಅವರು ಸಾಮಾಜಿಕ ಜಾಲಯತಾಣದ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಹೇಳಿದ್ದರು. ಆದರೆ, ಇದು ದಲಿತ ಸಮುದಾಯದ ಜಾತಿನಿಂದನೆ ಆಗಿದೆ ಎಂದು ಬೆಂಗಳೂರಿನ ಚನ್ನಮ್ಮನಕೆರೆ (ಸಿಕೆ ಅಚ್ಚುಕಟ್ಟು) ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದರು. ಆದರೆ, ಬ್ರಾಹ್ಮಣ ಸಮುದಾಯದ ಉಪೇಂದ್ರ ಅವರ ವಿರುದ್ಧ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆಂದು ದೂರು ನೀಡಿದ ಅಧಿಕಾರಿಯೂ ಬ್ರಾಹ್ಮಣ ಆಗಿದ್ದಾರೆ ಎನ್ನುವುದು ತಿಳಿದುಬಂದಿದೆ.
ಇನ್ನು ಡಾ.ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರು ಬರೆದಿರುವ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸರ್ವಸಮಾನರು, ಎಲ್ಲರಿಗೂ ಸಮಾನ ಹಕ್ಕಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹಲವಾರು ಶತಮಾನಗಳಿಂದ ಶೋಷಣೆಗೆ ಒಳಗಾದವರನ್ನು ಸಮಾಜದ ಮುನ್ನೆಲೆಗೆ ತಂದು ಸಮಾನತೆ ಸಿಗುವವರೆಗೂ ಕೆಲವು ವಿಶೇಷ ಪ್ರಾತಿನಿಧ್ಯಗಳನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಡಲಾಗಿದೆ. ಆದರೆ, ಕೆಲವು ಗಾದೆಗಳಲ್ಲಿ ಹಾಗೂ ಆಡುಭಾಷೆಗಳಲ್ಲಿ ದಲಿತರು, ಮಹಿಳೆಯರು ಸೇರಿದಂತೆ ಕಲವು ಸಮುದಾಯಗಳನ್ನು ಕೀಳಿರಿಮೆ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅದೇ ರೀತಿ ಬಳಸಲಾಗುವ ಗಾದೆಯನ್ನು ಬಳಸಿ ಉಪೇಂದ್ರ ಅವರು ರಾಜ್ಯದಾದ್ಯಂತ ದಲಿತ ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದರು.
ನಟ ಉಪೇಂದ್ರನಿಗೆ ಬಿಗ್ ರಿಲೀಫ್: ಹಲಸೂರು ಗೇಟ್ ಠಾಣೆಯ ಎಫ್ಐಆರ್ಗೂ ತಡೆಕೊಟ್ಟ ಹೈಕೋರ್ಟ್
ಗಾದೆ ಮಾತು ಹೇಳಿದ ಬೆನ್ನಲ್ಲೇ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದ ಉಪೇಂದ್ರ: ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಲೈವ್ ಕಾರ್ಯಕ್ರಮ ನಡೆಸುವಾಗ ಹೇಳಿದ ಒಂದು ಗಾದೆಯ ವೀಡಿಯೋಗೆ ಕೆಲವೇ ಕ್ಷಣಗಳಲ್ಲಿ ವಿರೋಧ ವ್ಯಕ್ತವಾಗತೊಡಗಿತು. ಆದರೆ, ಜಾತಿನಿಂದನೆ ಮಾಡುವ ಯಾವ ಉದ್ದೇಶವೂ ಇರದ ಉಪೇಂದ್ರ ಅವರು ತಮ್ಮ ವಿಡಿಯೋ ಡಿಲೀಟ್ ಮಾಡಿ, ಯಾವುದಾದರೂ ಸಮುದಾಯಕ್ಕೆ ಘಾಸಿಯಾಗಿದ್ದರೆ ಕ್ಷಮಿಸಿ ಎಂದು ಮನವಿ ಮಾಡಿದ್ದರು. ಆದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವಂತೆ ಉಪೇಂದ್ರ (Actor Upendra) ಮಾತನಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿ ವಿರೋಧದ ಪ್ರತಿಕ್ರಿಯೆಗಳು ಬರಲು ಶುರುವಾದವು.
ಉಪೇಂದ್ರನ ಮೇಲೆ ದೂರು ಕೊಟ್ಟವರು ಬ್ರಾಹ್ಮಣ: ಇನ್ನು ಬೆಂಗಳೂರಿನಲ್ಲಿ ಸಮತಾ ಸೈನಿಕ ದಳದ ಮುಖಂಡರೊಬ್ಬರು ಉಪೇಂದ್ರ ನೀಡಿದ್ದ ಹೇಳಿಕೆಯ ವಿಡಿಯೋವನ್ನು ಆಧರಿಸಿ ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ (Social welfare department) ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇನ್ನು ವಿಡಿಯೋ ನೋಡಿದ ಅಧಿಕಾರಿ ಹೇಳಿಕೆಯಲ್ಲಿ ಒಂದು ಸಮುದಾಯವನ್ನು ಘಾಸಿಗೊಳಿಸಿದ್ದಾರೆಂದು ಖಚಿತಪಡಿಸಿಕೊಂಡು ಹತ್ತಿರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ (Police FIR) ದಾಖಲಿಸಿಕೊಳ್ಳುತ್ತಾರೆ. ಆದರೆ, ಇಲ್ಲಿ ದೂರು ನೀಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಅವರು ಕೂಡ ಬ್ರಾಹ್ಮಣ (Brahmin) ಎಂದು ತನ್ನ ಜಾತಿಯನ್ನು ದಾಖಲು ಮಾಡಿದ್ದಾರೆ.
ತನ್ನ ಕರ್ತವ್ಯ ಮಾಡಿದ ಸರ್ಕಾರಿ ಅಧಿಕಾರಿ: ಉಪೇಂದ್ರ ಅವರ ಅಭಿಮಾನಿಗಳಿಂದ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ (CK Achukattu Police station) ದೂರು ನೀಡಿದವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಇನ್ನು ದೂರು ನೀಡಿದ ಸರ್ಕಾರಿ ಅಧಿಕಾರಿ ಬ್ರಾಹ್ಮಣ ಸಮುದಾಯದವರು (Brahmin Community) ಆಗಿದ್ದರೂ, ಅವರು ಸಮಾಜದಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ದೂರು ನೀಡಿದ್ದಾರೆ. ಇನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಮ್ಮ ಸರ್ಕಾರಿ ಕರ್ತವ್ಯವನ್ನು (Government service) ನಿರ್ವಹಣೆ ಮಾಡಿದ್ದು, ಕೆಲವರಿಂದ ಶ್ಲಾಘನೆಯೂ ವ್ಯಕ್ತವಾಗಿದೆ. ಆದರೆ, ಕೆಲವರು ಇದನ್ನೂ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.
ಆರ್ಎಸ್ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದರ್ಥ: ಕೆ.ಎಸ್. ಭಗವಾನ್ ಟೀಕೆ
ಉಪೇಂದ್ರನ ವಿರುದ್ಧದ 2 ಎಫ್ಐಆರ್ಗೆ ತಡೆಯಾಜ್ಞೆ ಕೊಟ್ಟ ಹೈಕೋರ್ಟ್: ಒಟ್ಟಾರೆ, ನಟ ಉಪೇಂದ್ರ ಅವರ ವಿರುದ್ಧ ಜಾತಿನಿಂದನೆ ಆರೋಪದಡಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆ (Halsuru gate Police station) ಮತ್ತು ಹನುಮಂತನಗರ ಪೊಲೀಸ್ ಠಾಣೆ ಮತ್ತು ಮಂಡ್ಯದ ನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಅದರಲ್ಲಿ ಈಗ ಚನ್ನಮ್ಮನಕೆರೆ ಅಚ್ಚುಕಟ್ಟು ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ತನಿಖೆಗೆ ಹೈಕೋರ್ಟ್ನಿಂದ (Karnataka High court) ತಡೆಯಾಜ್ಞೆ ಸಿಕ್ಕಿದೆ.