ಬಿಗ್ಬಾಸ್ ಪ್ರಥಮ್ ಪಾಲಿಟಿಕ್ಸ್ ಶುರು
ಸಿನಿಮಾ ಸಹವಾಸ ಬೇಡ. ವಾಪಸ್ ಹೋಗ್ತಿದ್ದೀನಿ. ಬೇಸಾಯ ಮಾಡ್ತೀನಿ. ಹಾಗಂತ ಎರಡೇ ವಾರದ ಹಿಂದೆ ಹೇಳಿದ್ದ ಒಳ್ಳೇ ಹುಡುಗ ಪ್ರಥಮ್ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಅವರ ನಟನೆಯ ಎಂಎಲ್ಎ ಸಿನಿಮಾ ಈ ವಾರವೇ ತೆರೆಗೆ ಬರುತ್ತಿದೆ.
ಅಂದ ಹಾಗೆ ಎಂಎಲ್ಎ ಅಂದರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ. ಪ್ರಥಮ್ ಬಗ್ಗೆ ಹಾಗೆ ಹೇಳಿದರೆ ತಪ್ಪೇನಿಲ್ಲ.
ರಾಮಕೃಷ್ಣ ಪರಮಹಂಸರು ಶಿಷ್ಯ ವಿವೇಕಾನಂದರಿಗೆ ಹೇಳಿದ ಸಣ್ಣ ಕತೆಯೊಂದನ್ನು ಆಧರಿಸಿ ಈ ಚಿತ್ರವನ್ನು ಮನಾಡಲಾಗಿದೆ. ಇಂಥ ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ‘ನಾನಿಲ್ಲಿ ಇರಲಾರೆ, ಚಿತ್ರರಂಗಕ್ಕೆ ಗುಡ್ ಬೈ’ ಎಂದ ಪ್ರಥಮ್ನ ವರ್ತನೆ ನೋಡಿ ನಿರ್ಮಾಪಕರು ಹೆದರಿದರಾ? ಗೊತ್ತಿಲ್ಲ.
ಆದರೂ ಸಿನಿಮಾ ಬಿಡುಗಡೆಯ ದಿನಾಂಕವನ್ನು ದಿಡೀರ್ ಅಂತ ಘೋಷಿಸಿ ಮಾಧ್ಯಮಗಳ ಮುಂದೆ ಬಂದರು. ಜತೆಗೆ ಪ್ರಥಮ್ ಕೂಡ ಇದ್ದರು. ತಮ್ಮ ಹೇಳಿಕೆಗೆ ಹತ್ತಾರು ಕಾರಣಗಳನ್ನು ತಮ್ಮದೇ ಸ್ಟೈಲಿನಲ್ಲಿ ಕೊಟ್ಟರೂ ಅದೇ ‘ಎಂಎಲ್ಎ’ ಸಿನಿಮಾ ಬಿಡುಗಡೆಯ ಡ್ರಾಮಾನಾ ಎನ್ನುವ ಗುಮಾನಿಗೂ ಕಾರಣವಾದರು.
ಸ್ಪರ್ಶ ರೇಖಾ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡರೆ, ರಿಯಲ್ ರಾಜಕಾರಣಿ ಎಚ್ ಎಂ ರೇವಣ್ಣ ಕೂಡ ತೆರೆ ಮೇಲೆ ಬಂದು ಹೋಗುತ್ತಾರೆ. ಉಳಿದಂತೆ ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ‘ನನ್ನ ನಿಜ ಜೀವನಕ್ಕೆ ಹತ್ತಿರವಾಗಿರುವ ಕತೆ ಈ ಚಿತ್ರ ದಲ್ಲಿದೆ. ಹೊಸ ರೀತಿಯ ಸಿನಿಮಾ. ರಾಜಕೀಯ, ಪ್ರೀತಿ, ದ್ವೇಷ ಮತ್ತು ಮನರಂಜನೆ’ ಚಿತ್ರದ ಹೈಲೈಟ್ ಎಂಬುದು ನಟ ಪ್ರಥಮ್ನ ‘ಎಂಎಲ್ಎಲ್’ ಪಾಲಿಟಿಕ್ಸ್ ಮಾತು.