ಫೆ.17ರಿಂದ ಬರಗೂರು ನಿರ್ದೇಶನದ ಚಿತ್ರ ‘ಮೂಕನಾಯಕ’!
ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಚಿತ್ರ ವಿಶೇಷ ಪ್ರದರ್ಶನಕ್ಕೆ ರೆಡಿ ಆಗಿದೆ. ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯೊಂದಿಗೆ ಚಿತ್ರವನ್ನು ಜನ ಸಮುದಾಯಕ್ಕೆ ತಲುಪಿಸಲು ಫೆ. 17ರಿಂದ ‘ಮೂಕ ನಾಯಕ’ ಪ್ರರ್ಯಾಯ ಬಿಡುಗಡೆಯ ಪ್ರಯೋಗ ಆರಂಭಗೊಳ್ಳುತ್ತಿದೆ.
‘ಚಿತ್ರಯಾತ್ರೆ’ ಕಾರ್ಯಕ್ರಮದಲ್ಲಿ ಒಟ್ಟು 100 ಪ್ರದರ್ಶನಗಳ ಗುರಿ ಹೊಂದಿದೆ. ಬೆಂಗಳೂರು, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ , ರಾಮನಗರ, ಬೆಳಗಾವಿ, ಹಾವೇರಿ, ಹಾಸನ, ಮಂಡ್ಯ, ಚಿಕ್ಕಮಗಳೂರು ಹಾಗೂ ಮೈಸೂರು ಸೇರಿ ರಾಜ್ಯದ ಒಟ್ಟು 18 ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುವ ಚಿತ್ರಯಾತ್ರೆ ಮೈಸೂರಿನಲ್ಲಿ ಸಮಾರೋಪ ಸಮಾರಂಭಗೊಳ್ಳುತ್ತಿದೆ. ಅಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರಯಾತ್ರೆ ಸಂಯೋಜಕರನ್ನು ಸನ್ಮಾನಿಸುವ, ಪ್ರೇಕ್ಷಕರ ಜತೆಗೆ ಸಂವಾದ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.
ಈಗಾಗಲೇ ಶಾಂತಿ,ಏಕಲವ್ಯ, ಉಗ್ರಗಾಮಿ, ಶಬರಿ, ಭೂಮಿತಾಯಿ ಹಾಗೂ ‘ಮರಣದಂಡನೆ’ ಚಿತ್ರಗಳನ್ನು ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯೊಂದಿಗೆ ಜನರ ಬಳಿಗೆ ತೆಗೆದುಕೊಂಡು ಹೋಗಿದ್ದರು ನಿರ್ದೇಶಕ ಬರಗೂರು ರಾಮಚಂದ್ರಪ್ಪ. ಈಗ ಆ ಸರದಿ ‘ಮೂಕ ನಾಯಕ ’ಚಿತ್ರದ್ದು.‘ ಈ ಪ್ರಯೋಗದ ಒಟ್ಟು ಉದ್ದೇಶ ಜನರ ಬಳಿಗೆ ಸಿನಿಮಾವನ್ನು ತೆಗೆದುಕೊಂಡು ಹೋಗಬೇಕು ಎನ್ನುವುದೇ ಆಗಿದೆ. ಕಲಾತ್ಮಕ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಅಲ್ಲಿಗೆ ಬಂದು ಜನ ಸಿನಿಮಾ ನೋಡುವುದಿಲ್ಲ ಎನ್ನುವ ಕೊರಗು ಮತ್ತು ಆರೋಪ ಮೊದಲಿನಿಂದಲೂ ಇದೆ. ಆದರೆ ನನಗೆ ಇಂತಹ ಪ್ರಯೋಗಗಳಲ್ಲಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿಯೇ ಇದು ಮತ್ತೊಂದು ಪ್ರಯೋಗ ಎನ್ನುತ್ತಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ.
ಬಾಲರಾಜ್ ಎಂ ಸಂಜೀವ್ ಮೂವೀಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಮೂಕ ನಾಯಕ ಚಿತ್ರ ಈಗಾಗಲೇ ಮೆಕ್ಸಿಕೊ, ಮುಂಬೈ, ನೋಯ್ಡ, ಕೇರಳ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.ನಿರ್ದೇಶನದ ಜತೆಗೆ ಕತೆ, ಚಿತ್ರಕತೆ, ಗೀತೆ, ಸಂಭಾಷಣೆ ಬರಗೂರು ಅವರದ್ದೇ ಆಗಿದೆ. ಕುಮಾರ್ ಗೋವಿಂದ್, ಸುಂದರರಾಆಜ್, ಸ್ಪರ್ಷ ರೇಖಾ,ಶೀತಲ್ ಶೆಟ್ಟಿ, ಯತಿರಾಜ್ ಮತ್ತಿತರರು ಚಿತ್ರದಲ್ಲಿದ್ದಾರೆ. ಮೂಗನಾಗಿರುವ ಒಬ್ಬ ಚಿತ್ರ ಕಲಾವಿದನ ಕತೆಯನ್ನು ಹೇಳಲಿದೆ ಈ ಚಿತ್ರ.