ಜಗ್ಗೇಶ್ಗೆ ’ತೋತಾಪುರಿ’ ತಿನ್ನಿಸಲಿದ್ದಾರೆ ಅದಿತಿ ಪ್ರಭುದೇವ್ !
ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಜೋಡಿಯ ‘ತೋತಾಪುರಿ’ ಚಿತ್ರಕ್ಕೆ ಚಿತ್ರೀಕರಣ ಶುರುವಾಗಿ ಹಲವು ದಿನ ಕಳೆದಿವೆ. ಈಗಾಗಲೇ ಶ್ರೀರಂಗಪಟ್ಟಣ, ಬನ್ನೂರು ಹಾಗೂ ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ ಚಿತ್ರತಂಡ.
ಬೆಂಗಳೂರು (ಸೆ. 25): ಇದೀಗ ಈ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಧೈರ್ಯಂ ಖ್ಯಾತಿಯ ನಟಿ ಅದಿತಿ ಪ್ರಭುದೇವ್ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿರುವ ಅದಿತಿ ಪ್ರಭುದೇವ್, ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರಕ್ಕೆ ನಾಯಕಿ ಆಗಿ ಸುದ್ದಿಯಲ್ಲಿದ್ದರು.
‘ಗ್ಲಾಮರ್ ಅಥವಾ ಗ್ರಾಮರ್ ಎನ್ನುವುದಕ್ಕಿಂತ ಪಾತ್ರಕ್ಕೆ ತಕ್ಕ ಬೇಕು ಅಂತಲೇ ನಾವು ಈ ಹಿಂದೆ ಆಡಿಷನ್ ಮಾಡಿದ್ದೆವು. ಅಲ್ಲಿ ನಾವು ಅಂತಿಮವಾಗಿ ಇಬ್ಬರು ನಾಯಕಿಯರನ್ನು ಆಯ್ಕೆ ಮಾಡಿಕೊಂಡಿದ್ದೆವು. ಕಾವ್ಯಾಶೆಟ್ಟಿ ಹಾಗೂ ಅದಿತಿ ಪ್ರಭುದೇವ್ ಪಾತ್ರಕ್ಕೆ ಸೂಕ್ತರಾಗಬಹುದು ಅಂದುಕೊಂಡಿದ್ದೆವು. ಗ್ಲಾಮರ್ಗಿಂತ ನಮಗೆ ಶುದ್ಧವಾದ ಭಾಷೆ, ಅದಕ್ಕೆ ತಕ್ಕಂತೆ ಅಭಿನಯ ಮುಖ್ಯವಾಗಿತ್ತು. ಆಪ್ರಕಾರ ಚಿತ್ರತಂಡವೀಗ ಇಬ್ಬರಲ್ಲಿ ಒಬ್ಬರನ್ನು ಫೈನಲ್ ಮಾಡಲು ಮುಂದಾಗಿದೆ. ಬಹುತೇಕ ಅದಿತಿ ಪ್ರಭುದೇವ್ ಅವರೇ ನಾಯಕಿ ಆಗಿ ಆಯ್ಕೆ ಯಾದರೂ ಅಚ್ಚರಿ ಇಲ್ಲ’ ಎನ್ನುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್.
ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಷನ್ ಸಿನಿಮಾ ಅಂದ್ರೆ ಕಥಾ ನಾಯಕನ ಹಾಗೆ ಉಳಿದ ಪಾತ್ರಗಳು ಅಷ್ಟೇ ಮುಖ್ಯ ಎನಿಸುತ್ತವೆ. ಈಗಾಗಲೇ ಈ ಚಿತ್ರಕ್ಕೆ ವೀಣಾ ಸುಂದರ್, ಸುಮನ್ ರಂಗನಾಥ್ ಆಯ್ಕೆ ಆಗಿದ್ದು ಹಳೇ ಮಾತು.
ವಿಶೇಷ ಅಂದ್ರೆ ಅದಿತಿ ಇಲ್ಲಿ ಓರ್ವ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಸರು ಶಕೀಲಾ ಭಾನು. ಸಂಪ್ರದಾಯಸ್ಥ ಕುಟುಂಬದ ಆ ಹುಡುಗಿ, ಉಡಾಳ ನಾಯಕನಿಗೆ ಪರಿಚಯವಾದ ನಂತರ ಆಕೆಯ ಬದುಕಲ್ಲಿ ಏನೆಲ್ಲ ಆಗುತ್ತೆ ಅನ್ನೋದು ಚಿತ್ರದ ಕತೆ ಅಂತಾರೆ ನಿರ್ದೇಶಕರು.