ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಚಿತ್ರ ನಟಿ ರಚಿತಾ ರಾಮ್
ಚಿತ್ರನಟಿ ರಚಿತಾ ರಾಮ್ ಶುಕ್ರವಾರ ತಮ್ಮ ಮನೆದೇವರಾದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಾಮಾನ್ಯರಂತೆ ಬೆಂಗಳೂರಿನಿಂದ ನೇರವಾಗಿ ಬೆಳಗ್ಗೆ 9 ಗಂಟೆಯ ವೇಳೆ ಮೇಲುಕೋಟೆಗೆ ಬಂದ ನಟಿ ರಚಿತಾ ಯದುಗಿರಿನಾಯಕಿ ಮಹಾಲಕ್ಷ್ಮಿ, ರಾಮಾನುಜಾಚಾರ್ಯರ ದರ್ಶನ ಪಡೆದರು.
ಮೇಲುಕೋಟೆ (ಫೆ.18): ಚಿತ್ರ ನಟಿ ರಚಿತಾ ರಾಮ್ ಶುಕ್ರವಾರ ತಮ್ಮ ಮನೆದೇವರಾದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಾಮಾನ್ಯರಂತೆ ಬೆಂಗಳೂರಿನಿಂದ ನೇರವಾಗಿ ಬೆಳಗ್ಗೆ 9 ಗಂಟೆಯ ವೇಳೆ ಮೇಲುಕೋಟೆಗೆ ಬಂದ ನಟಿ ರಚಿತಾ ಯದುಗಿರಿನಾಯಕಿ ಮಹಾಲಕ್ಷ್ಮಿ, ರಾಮಾನುಜಾಚಾರ್ಯರ ದರ್ಶನ ಪಡೆದರು. ಈ ವೇಳೆ ಇಷ್ಟಾರ್ಥ ಸಿದ್ಧಿಸಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿ ಪೊಂಗಲ್ ಮತ್ತು ತುಳಸಿ ಪ್ರಸಾದ ನೀಡಲಾಯಿತು.
ದೇವಾಲಯದ ಅಮ್ಮನವರ ಸನ್ನಿಧಿಯ ಪ್ರಾಂಗಣದ ಶಿಲ್ಪಕಲಾ ಸೌಂದರ್ಯ ವೀಕ್ಷಿಸಿದ ರಚಿತಾ ರಾಮ್ ಮುಂಬರುವ ಮಾರ್ಚ್ ಏಪ್ರಿಲ್ನಲ್ಲಿ ನಡೆಯುವ ಹತ್ತು ದಿನಗಳ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಭಾಗವಹಿಸಿ ದೇವರದರ್ಶನ ಪಡೆದು ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು. ಈ ವೇಳೆ ದೇವಾಲಯದ ಪರಂಪರೆ, ಸಂಸ್ಕೃತಿ ಹಾಗೂ ವೈರಮುಡಿ ಉತ್ಸವದ ವಿಶೇಷಗಳ ಬಗ್ಗೆ ರಚಿತಾರಿಗೆ ಮಾಹಿತಿ ನೀಡಿದ ಸ್ಥಾನೀಕಂ ಸಂತಾನರಾಮನ್ ಕರ್ನಾಟಕದ ಮನೆಮಾತಾಗಿ ಬೆಳೆದ ನೀವು ಭಕ್ತರಿಗೆ ಅನುಕೂಲವಾಗುವಂತೆ ಕೋಟ್ಯಂತರ ಭಕ್ತರ ಆರಾಧ್ಯದೈವ ಹಾಗೂ ನಿಮ್ಮ ಮನೆದೇವರಾದ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ನೆನಪಿನಲ್ಲುಳಿಯುವ ಸೇವೆ ಮಾಡಿ ಎಂದರು.
ಸಂಭಾವನೆ ಕಿರಿಕ್; ನಾಯಕಿಯರಿಗೆ ಯಾಕೆ ಮೋಸ ಆಗುತ್ತಿದೆ ಎಂದು ವಿವರಿಸಿದ ರಚಿತಾ ರಾಮ್
ವೈರಮುಡಿ ಬ್ರಹ್ಮೋತ್ಸವ ಮತ್ತಷ್ಟು ವೈಭವವಾಗಿ ನಡೆಯಲು ಸಹಕಾರ ನೀಡಿ ಇದು ನಿಮ್ಮ ಯಶಸ್ಸಿಗೆ ಸಾರ್ಥಕ ಸೇವೆಯಾಗಿ ಉಳಿಯತ್ತದೆ ಭಗವಂತನ ಕೃಪೆ ಹೆಚ್ಚಾಗಿ ದೊರೆಯುತ್ತದೆ ಎಂದರು. ಸರಳ ಉಡುಪಿನಲ್ಲಿದ್ದರೂ ಚಿತ್ರನಟಿ ರಚಿತಾ ರಾಮ್ ಅವರನ್ನು ಗುರುತಿಸಿದ ಭಕ್ತರು ನೆಚ್ಚಿನ ನಟಿ ಜೊತೆ ಸೆಲ್ಪಿ ತೆಗೆದುಕೊಂಡು ಸಂತೋಷಪಟ್ಟರು. ಈ ವೇಳೆ ಅಮ್ಮನವರ ಸನ್ನಿಧಿ ಅರ್ಚಕರಾದ ನಾರಾಯಣಪ್ರಸಾದ್ ಭಟ್ಟರ್, ಸ್ಥಾನೀಕರಾದ ಕೋವಿಲ್ ನಂಬಿ ಪ್ರಸನ್ನ ಮತ್ತಿತರರು ಇದ್ದರು. ದೇವರ ದರ್ಶನದ ನಂತರ ಕಲ್ಯಾಣಿಗೆ ತೆರಳಿದ ರಚಿತಾರಾಂ ದಾಸಯ್ಯರನ್ನು ಸಂಪರ್ಕಿಸಿ ನಾಮಹಾಕಿಸಿಕೊಂಡು ಬಂದು ರಾಜಗೋಪುರ ದರ್ಶನ ಮಾಡಿ ತೆರಳಿದರು.
17 ರಂದು ಪೂರ್ವಭಾವಿ ಸಭೆ: ಮೇಲುಕೋಟೆಯಲ್ಲಿ ಏ.1ರಂದು ನಡೆಯುವ ಭೂವೈಕುಂಠ ಶ್ರೀಚೆಲುವನಾರಾಯಣಸ್ವಾಮಿಯವರ ಪ್ರಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವ ಸಿದ್ದತೆ ಸಂಬಂಧಿಸಿದಂತೆ ಫೆ.17 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಥಮ ಪೂರ್ವಭಾವಿ ಸಭೆ ನಡೆಯಲಿದೆ. ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು.
ಪಾಸಿಟಿವ್ ಅಥವಾ ನೆಗೆಟಿವ್ ಒಟ್ಟಾರೆ ಸುದ್ದಿಯಲ್ಲಿರುವೆ: ಟ್ರೋಲ್ ಮತ್ತು ಮದುವೆ ಬಗ್ಗೆ ರಚಿತಾ ರಾಮ್ ಉತ್ತರ
ಅಪರ ಜಿಲ್ಲಾಧಿಕಾರಿ, ದೇವಾಲಯದ ಆಡಳಿತಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ದೇಗುಲದ ಸ್ಥಾನೀಕರು, ಅರ್ಚಕರುಭಾಗವಹಿಸುವರು. ಹತ್ತು ದಿನಗಳ ಕಾಲ ನಡೆಯುವ ವೈರಮುಡಿ ಜಾತ್ರಾ ಮಹೋತ್ಸವವನ್ನು ವೈಭವದಿಂದ ನಡೆಸುವ ಜೊತೆಗೆ ಮೇಲುಕೋಟೆಯಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದ್ದಾರೆ. ವೈರಮುಡಿ ಬ್ರಹ್ಮೋತ್ಸವ ಮಾ.27 ರಿಂದಲೇ ಆರಂಭವಾಗಿ ಏ.8 ರವರೆಗೆ ನಡೆಯಲಿದೆ.