'ಚೂರಿಕಟ್ಟೆ' ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಹೊರಟಿರುವ ಪ್ರೇರಣಾ ಕನ್ನಡ ಪ್ರಭಕ್ಕೆ ಮಾತಿಗೆ ಸಿಕ್ಕಾಗ
ಚೌಕಬಾರ ಕಿರು ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ರಾಘು ಶಿವಮೊಗ್ಗ. ರಾಜ್ಯ ಪ್ರಶಸ್ತಿಗೂ ಪಾತ್ರ ರಾದವರು. ಈಗ ‘ಚೂರಿಕಟ್ಟೆ’ಗೆ ಮೂಲಕ ಬೆಳ್ಳೆತೆರೆಗೆ ಎಂಟ್ರಿಯಾಗಿದ್ದಾರೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ಪ್ರವೀಣ್ ಅವರಿಗೆ ನಾಯಕಿಯಾಗುವ ಮೂಲಕ ನಟನೆಯ ಪರೀಕ್ಷೆಗೆ ನಿಂತಿರುವ ಪ್ರೇರಣಾ ಅವರೊಂದಿಗೆ ಮಾತು.
ಬೆಂಗಳೂರು (ಜ.11): ಚೌಕಬಾರ ಕಿರು ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ರಾಘು ಶಿವಮೊಗ್ಗ. ರಾಜ್ಯ ಪ್ರಶಸ್ತಿಗೂ ಪಾತ್ರ ರಾದವರು. ಈಗ ‘ಚೂರಿಕಟ್ಟೆ’ಗೆ ಮೂಲಕ ಬೆಳ್ಳೆತೆರೆಗೆ ಎಂಟ್ರಿಯಾಗಿದ್ದಾರೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ಪ್ರವೀಣ್ ಅವರಿಗೆ ನಾಯಕಿಯಾಗುವ ಮೂಲಕ ನಟನೆಯ ಪರೀಕ್ಷೆಗೆ ನಿಂತಿರುವ ಪ್ರೇರಣಾ ಅವರೊಂದಿಗೆ ಮಾತು.
ಈ ಚಿತ್ರದ ಕತೆ ಏನು?
ಮಲೆನಾಡು, ಕಾಡು, ಬ್ರಿಟಿಷರ ಕಾಲದ ಕತೆಯ ಹಿನ್ನೆಲೆ ಇರುವ ಚಿತ್ರ ಇದಾಗಿದ್ದು, ಭರವಸೆ ಮೂಡಿಸುವ ಸಿನಿಮಾ. ಕಾಡಿನ ಮಾಫಿಯಾ ಜತೆಗೆ ಪೊಲೀಸ್ ವ್ಯವಸ್ಥೆಯನ್ನು ಬೆತ್ತಲು ಮಾಡುವ ಕತೆ ಇಲ್ಲಿದೆ. ಕಾನ್ಸ್ಟೇಬಲ್ ಆಗಲು ಹೊರಟ ಹುಡುಗನ ಕತೆ. ಆತನ ಕತೆಯ ತಿರುವುಗಳಲ್ಲಿ ಜತೆಯಾಗುವ ಪಾತ್ರಧಾರಿ ನಾನು.
ನಿಮ್ಮ ನಟನೆಯ ಹಿನ್ನೆಲೆ ಏನು?
ಹುಟ್ಟಿದ್ದು ಬೆಂಗಳೂರಿನಲ್ಲೇ. ಬೆಳೆದಿದ್ದು ಹೈದರಬಾದ್. ಸಿನಿಮಾಗಳಿಗೆ ಬರುವ ಮುನ್ನ ಧಾರಾವಾಹಿಗಳಾದ ‘ನಿನ್ನ ಬಿಡಲಾರೆ’ ಹಾಗೂ ‘ಹರಹರ ಮಹದೇವ’ದಲ್ಲಿ ನಟಿಸಿದ್ದೇನೆ. ಕಿರು ಪರೆದೆಯಿಂದ ದೊಡ್ಡ ಪರದೆಯ ಸಿನಿಮಾ
ಪಯಣ ಶುರುವಾಗಿದ್ದು ಎಲ್ಲಿಂದ?
ಕರಾಳಿ ಎನ್ನುವ ಚಿತ್ರಕ್ಕೆ ನಾಯಕಿ ಆಗುವ ಮೂಲಕ. ಮೊದಲ ಚಿತ್ರವೇ ಹಾರರ್. ಹೀಗಾಗಿ ನನಗೆ ಆ ಸಿನಿಮಾ ಒಂದು ಐಡೆಂಟಿಟಿ ತಂದು ಕೊಟ್ಟಿತು. ಆ ನಂತರ ಚೂರಿಕಟ್ಟೆ. ವಿಶೇಷ ಅಂದರೆ ಇಂಜಿನಿಯರಿಂಗ್ ಓದುತ್ತಿರುವ ನಾನು 7 ನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಲೇ ‘ಚೂರಿಕಟ್ಟೆ’ ಚಿತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ಬಿಡುಗಡೆಯ ಹೊತ್ತಿಗೆ ೮ನೇ ಸೆಮಿಸ್ಟರ್ಗೆ ಕಾಲಿಟ್ಟು, ಮತ್ತೊಂದು ಸಿನಿಮಾ ಬರುವ ಹೊತ್ತಿಗೆ ಮತ್ತೊಂದು ಪರೀಕ್ಷೆ ಎದುರಾಗಿರುತ್ತದೆ. ಹೀಗಾಗಿ ಸಿನಿಮಾ ಮತ್ತು ಓದು ಜತೆ ಜತೆಗೇ ನಡೆಯುತ್ತಿದೆ.
ಚೂರಿಕಟ್ಟೆ ಚಿತ್ರದಲ್ಲಿ ನಿಮಗೆ ಅವಕಾಶ ಸಿಕ್ಕಿದ್ದು ಹೇಗೆ?
ಹೊಸ ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕೆ ಅಂತ ಸ್ಟುಡಿಯೋಗೆ ಹೋದೆ. ಅಲ್ಲಿಗೆ ಬಂದವರೊಬ್ಬರಿಂದ ‘ಚೂರಿಕಟ್ಟೆ’ ಎನ್ನುವ ಚಿತ್ರಕ್ಕೆ ಹೊಸ ನಾಯಕಿಯನ್ನು ಹುಡುಕುತ್ತಿದ್ದಾರೆ
ನಿರ್ದೇಶಕ ರಾಘು ಶಿವಮೊಗ್ಗ ಎಂದು ಗೊತ್ತಾಯಿತು. ಬೆಂಗಳೂರಿನ ನಾಗರಭಾವಿಯಲ್ಲಿರುವ ಅವರ ಕಚೇರಿಗೆ ಹೋಗಿ ಆಡಿಷನ್ ಕೊಟ್ಟು ಬಂದೆ. ಹಾಗೆ ನಾನು ‘ಚೂರಿಕಟ್ಟೆ’ಗೆ ಜತೆಯಾದೆ.
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ಈ ಚಿತ್ರದಲ್ಲಿ ಕಲಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಮತ್ತು ಹೆಸರು ತುಂಬಾ ಫ್ಯಾಮಿಲಿ ಓರಿಯೆಂಟ್ಟೆಡ್ ಆಗಿದೆ. ಈ ಚಿತ್ರದ ನಂತರ ನನಗೆ ಕನ್ನಡದಲ್ಲಿ ಹೆಚ್ಚು ಅವಕಾಶಗಳು
ಸಿಗುತ್ತವೆ. ಅಷ್ಟರ ಮಟ್ಟಿಗೆ ಚೂರಿಕಟ್ಟೆಯಲ್ಲಿ ನನ್ನ ಪಾತ್ರ ನೋಡುಗರನ್ನು ಪ್ರಭಾವಿಸುತ್ತದೆ. ರಾಘು ಶಿವಮೊಗ್ಗ ಅವರಿಗೆ ‘ಚೂರಿಕಟ್ಟೆ’ ಮೊದಲ ನಿರ್ದೇಶನದ ಸಿನಿಮಾ. ‘ಸಿಂಪಲ್ಲಾಗ್
ಇನ್ನೊಂದ್ ಲವ್ ಸ್ಟೋರಿ’ ಚಿತ್ರದ ಮೂಲಕ ಬಂದ ಪ್ರವೀಣ್ ಈ ಚಿತ್ರದ ನಾಯಕ.
ಸಾಮಾನ್ಯವಾಗಿ ನಿಮಗೆ ಎಂಥ ಪಾತ್ರಗಳೆಂದರೆ ಇಷ್ಟ?
ಪಾತ್ರಗಳ ವಿಚಾರಕ್ಕೆ ಬಂದರೆ ನಾಯಕನಿಗೆ ಒಬ್ಬ ನಾಯಕಿ ಇದ್ದರೆ ಸಾಕು ಎನ್ನುವುದಕ್ಕಿಂತ ಸಿನಿಮಾ ಮುಗಿದ ಮೇಲೂ ನೋಡುಗರು ತಮ್ಮನ್ನು ನೆನಪಿಟ್ಟುಕೊಳ್ಳಬೇಕು ಅಂತ ಪಾತ್ರ ಬೇಕು. ನೆಗೆಟೀವ್ ರೋಲ್ನಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಇಂಥ ಪಾತ್ರಗಳಿಗೆ ತುಂಬಾ ಸ್ಕೋಪ್ ಇರುತ್ತದೆ.
ಸಂದರ್ಶನ: ಆರ್.ಕೇಶವಮೂರ್ತಿ