ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ - ಸುದೀಪ್

ಬೆಂಗಳೂರು[ಅ.10]: ಮದಕರಿನಾಯಕ ಚಿತ್ರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಟ್ವಿಟರ್ ಹಾಗೂ ಗೂಗಲ್ ಪ್ಲಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ’ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವಂತಿದೆ.

ವಿಷಯ ಸರಳವಾಗಿದೆ... ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನೆಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ. 

ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗೂ ಚಾನೆಲ್ ಅವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ. 

ಸಿನೆಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನೆಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಎರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ. 

ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗೂ ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ' ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ. 


Scroll to load tweet…
Scroll to load tweet…
Scroll to load tweet…