ಕವಚ ಚಿತ್ರಕ್ಕೆ ಪ್ರಚಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ!
ಕಾಲ ಹೀಗೆ ಇರೋದಿಲ್ಲ, ಬದಲಾಗುತ್ತೆ..!
- ಶಿವರಾಜ್ ಕುಮಾರ್ ಬೇಸರದಲ್ಲಿದ್ದರು. ‘ಕವಚ’ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಚುನಾವಣೆ ಅಬ್ಬರದಲ್ಲಿ ಅದಕ್ಕೆ ತಕ್ಕನಾದ ಪ್ರಚಾರ ಸಿಗುತ್ತಿಲ್ಲ ಎನ್ನುವುದು ಅವರ ನೋವು. ಭಾನುವಾರ ಚಿತ್ರದ ಸಕ್ಸಸ್ಮೀಟ್ನಲ್ಲಿ ಶಿವರಾಜ್ ಕುಮಾರ್ ಆ ನೋವು ಹೊರ ಹಾಕಿದರು.
‘ನಮ್ ಕಡೆಗೂ ಸ್ವಲ್ಪ ನೋಡಿ ಸ್ವಾಮಿ, ಬರೀ ಚುನಾವಣೆ ಅಂತ ನೀವು ಟೈಮ್ ಕೊಟ್ಟರೆ, ಒಳ್ಳೆಯ ಸಿನಿಮಾಗಳ ಕತೆ ಏನಾಗ್ಬೇಕು ಹೇಳಿ....? ಅಂತ ಕೊಂಚ ಖಡಕ್ ಆಗಿಯೇ ಮಾಧ್ಯಮದವರನ್ನು ಪ್ರಶ್ನಿಸುತ್ತಾ, ‘ಕವಚ ’ಚಿತ್ರದ ಸಕ್ಸಸ್ಫುಲ್ ಜರ್ನಿ ಕುರಿತು ಮಾತನಾಡಿದರು.
‘ಈಗ ಒಳ್ಳೆಯ ಸಿನಿಮಾಗಳು ಬರುವುದೇ ಅಪರೂಪ. ಬಂದಾಗ ಅದಕ್ಕೆ ಸಪೋರ್ಟ್ ಮಾಡೋದು ಎಲ್ಲರ ಜವಾಬ್ದಾರಿ. ಬರೀ ಮಾಧ್ಯಮದವರು ಮಾತ್ರವಲ್ಲ, ಎಲ್ಲರೂ ಬೆಂಬಲ ನೀಡಬೇಕು. ಆಗ ಮಾತ್ರ ಒಳ್ಳೆಯ ಸಿನಿಮಾಗಳು ಉಳಿಯುವುದಕ್ಕೆ ಸಾಧ್ಯ. ನಾನೇನು ಹೇಳುತ್ತಿದ್ದೇನೆ ಅಂತ ಅಚ್ಚರಿ ಎನಿಸಬಹುದು, ನನಗೆ ಸಿನಿಮಾ ಮುಖ್ಯ. ಸಿನಿಮಾ ಅಂತ ಬಂದಾಗ ಪ್ರಾಣ ಕೊಡುವುದಕ್ಕೂ ನಾನು ಸಿದ್ಧ’ ಎಂದರು ಶಿವಣ್ಣ.
‘ನನ್ನ ಕರಿಯರ್ನಲ್ಲಿ ‘ಕವಚ’ ಒಂದೊಳ್ಳೆ ಸಿನಿಮಾ. ಅಲ್ಲಿ ಅಂಧನ ಪಾತ್ರ. ಒಪ್ಪಿಕೊಳ್ಳುವಾಗ ಹಾಗೋ ಏನೋ ಎನ್ನುವ ಆತಂಕ ಇತ್ತು. ಈಗ ಚಿತ್ರವನ್ನು ಪ್ರೇಕ್ಷಕರು ನೋಡಿ, ಮೆಚ್ಚುಗೆ ಹೇಳುತ್ತಿರುವುದನ್ನು ಕಂಡಾಗ ಖುಷಿ ಆಗುತ್ತಿದೆ. ನಾವೀಗ ಹುಬ್ಬಳ್ಳಿ, ಶಿವಮೊಗ್ಗ ಸೇರಿ ಅನೇಕ ಕಡೆಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿ ಜನರ ಜತೆಗೆ ಮಾನಾಡಿದ್ದೇವೆ. ಪ್ರತಿಯೊಬ್ಬರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಇದು ಖುಷಿ ತಂದಿದೆ ’ಎಂದರು ಶಿವಣ್ಣ.