ಐಪಿಎಲ್ ಹವಾ ಜೋರಾಗಿದೆ. ಆರ್‌ಸಿಬಿ ಕೇವಲ ಎರಡೇ ಪಂದ್ಯದಲ್ಲಿ ಗೆದ್ದರೂ ಅಭಿಮಾನಕ್ಕೇನೂ ಕೊರತೆಯಾಗಿಲ್ಲ. ಈ ಬೆನ್ನಲ್ಲೇ ಅಲ್ಲಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗುತ್ತಿದೆ. ಡಿಪ್ಲೋಮಾ ಯುವಕನನ್ನೂ ಬಲಿ ತೆಗೆದುಕೊಂಡಿದೆ. ಈ ಸ್ಥಿತಿಯಲ್ಲಿ ಸ್ಯಾಂಡಲ್‌ವುಡ್ ನಟನ ಬುದ್ಧೀವಾದವಿದು.

ಇಡೀ ಭಾರತದಲ್ಲಿ ಸುದ್ದಿ ಮಾಡಿದ ಮಂಡ್ಯದಲ್ಲಿ ಚುನಾವಣಾ ಕಾವು ಅದೆಷ್ಟಿತ್ತೆಂದರೆ ಇಂಡ್ಯಾದಲ್ಲಿ ಚುನಾವಣೆಯೋ, ಮಂಡ್ಯದಲ್ಲೋ ಎನ್ನುವಂತಾಗಿತ್ತು. ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಇಲ್ಲಿ ಮತದಾನವಾಗಿದ್ದು, ತುಸು ತಣ್ಣಗಾಗಿದೆ. ಆದರೆ, ಬೆಟ್ಟಿಂಗ್ ಮಾತ್ರ ತಾರಕಕ್ಕೇರಿದೆ. ಸಾಕು ಪ್ರಾಣಿಗಳಿಂದ ಹಿಡಿದು, ಮನೆ, ತೋಟವನ್ನೂ ಬಿಟ್ಟಿಂಗ್‌ಗೆ ಇಡಲಾಗಿದೆ. ಮತ್ತೊಂದೆಡೆ ಐಪಿಎಲ್ ಹುಚ್ಚಿಗೆ ಯುವ ಮನಸುಗಳೇ ಕಮರುತ್ತಿದೆ. ಐಪಿಎಲ್ ಬೆಟ್ಟಿಂಗ್ ಯುವಕನನ್ನು ಬಲಿ ತೆಗೆದುಕೊಂಡಿರುವುದು ನಿಜಕ್ಕೂ ಕಳವಳಕಾರಿ.

Add Asianetnews Kannada as a Preferred SourcegooglePreferred

ಈ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ ಜಗ್ಗೇಶ್ ಯುವಕರಿಗೆ ಇಂಥ ದಂಧೆಯಿಂದ ದೂರ ಇರುವಂತೆ ಕಿವಿ ಮಾತು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಐಪಿಎಲ್ ಮೇನಿಯಾ ಶುರುವಾದರೆ ಸಾಕು ಕ್ರಿಕೆಟ್ ಫ್ಯಾನ್ಸ್‌ಗೆ ಶುರುವಾಗುತ್ತದೆ ಬೆಟ್ಟಿಂಗ್‌ಗೆ ಕೈ ಹಾಕುವ ಕೆಲಸವೆಂದು, ದಾರಿ ತಪ್ಪಿದ ಕೆಲಸ ಮಾಡಿ ಆತ್ಮಹತ್ಯೆ ಮಾಡಿಕೊಂಡ ಹಾಸನದ ಹುಡುಗ ಲತೇಶ್ ಘಟನೆ ಹಿನ್ನೆಲೆಯಲ್ಲಿ ಮನನೊಂದು ಮಾತನಾಡಿದ್ದಾರೆ.

'ನಲ್ಮೆಯ ಯುವಮಿತ್ರರೇ ಏಕೆ ಬೇಕು ಈ ಬೆಟ್ಟಿಂಗ್ ದಂಧೆ ಸಹವಾಸ? ಕಷ್ಟಪಟ್ಟು ಓದಿ ಉತ್ತಮ ಕೆಲಸ ಪಡೆದು, ವಯಸ್ಸಾದ ತಂದೆ ತಾಯಿಗೆ ಆಸರೆ ಆಗಬೇಕಾದ ನೀವುಗಳೇ ಈ ರೀತಿಯಾದರೆ? ಪಾಪ ನಿಮ್ಮನ್ನ ನಂಬಿ ತಮ್ಮ ಬೆವರಿನ ಹಣ ವ್ಯೆಯಮಾಡಿದ್ದಕ್ಕೆ ಇದಾ ಫಲ! ಬೇಡ ಜೂಜು ಮೋಜು ಮಸ್ತಿ ಹೆಣ್ಣು ಅಲ್ಲಾ ಜೀವನ! ಅದಕ್ಕಿಂತ ಶ್ರೇಷ್ಠ ಮಾನವ ಜನ್ಮ! ಮಕ್ಕಳೇ ಎಚ್ಚರ ಬದುಕಿಗಾಗಿ!’ ಎಂದು ಬರೆದಿದ್ದಾರೆ.

ಓದು, ಆಟವೆಂದು ಆ್ಯಕ್ಟಿವ್ ಆಗಿರಬೇಕಾದ ಈಗಿನ ವಿದ್ಯಾರ್ಥಿಗಳಿಗೆ ವಿಪರೀತ ಒತ್ತಡವಿದೆ. ಇಂಥ ಮೋಜು-ಜೂಜೆಂದು ಹಣ ವ್ಯಯಿಸುವುದರಲ್ಲಿ ಏನಿದೆ ಅರ್ಥ? ಬರಡಾಗದಿರಲಿ ಬದುಕು ಅಲ್ಲವೇ?