ಚುನಾವಣೆ ಬಳಿಕ ಯಡಿಯೂರಪ್ಪ ಮನೆಗೆ : ಕಾಂಗ್ರೆಸ್ ಮುಖಂಡರ ಹೊಸ ಬಾಂಬ್
ಲೋಕಸಭಾ ಮಹಾ ಸಮರದ ಬಿಸಿ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆ : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಮಹಾ ಸಮರ ಆರಂಭವಾಗಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಲೋಕಸಭಾ ಚುನಾವಣೆ ನಂತರ ಬಿ.ಎಸ್. ಯಡಿಯೂರಪ್ಪ ಅವರ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನ ಹೋಗುತ್ತದೆ ಎಂದ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಈಗಾಗಲೇ ಆರ್.ಆಶೋಕ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಮುಖಂಡರು ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಯಡಿಯೂರಪ್ಪ ಮನೆಗೆ ಹೋಗುವುದು ನಿಶ್ಚಿನ ಎಂದರು.
ಬಿಜೆಪಿ ಮುಖಂಡ ಸಿಟಿ ರವಿ ಯಡಿಯೂರಪ್ಪನವರ ವಾರಸುದಾರಿಕೆ ಅವರ ಮಕ್ಕಳಿಗೆ ವರ್ಗಾವಣೆಯಾಗುವುದಿಲ್ಲ ಎಂಬ ಹೇಳಿಕೆ ಬೆನ್ನಲ್ಲೆ ಶಾಮನೂರು ಇಂತಹ ಹೇಳಿಕೆ ನೀಡಿದ್ದಾರೆ.
ಇನ್ನು ಮೈತ್ರಿ ಸರ್ಕಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು ಸರ್ಕಾರ ಅತ್ಯಂತ ಸುಭದ್ರವಾಗಿದೆ. ಚುನಾವಣೆಯ ನಂತರವೂ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಅತ್ಯಂತ ಸ್ಥಿರವಾಗಿರುತ್ತದೆ. ಸರ್ಕಾರದ ಆಯುಷ್ಯದ ಬಗ್ಗೆ ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.