ರಾಜಕೀಯ ನಿವೃತ್ತಿ ಕುರಿತಾಗಿ ಮಾತನಾಡಿದ ಸಿಧು| ಫಲಿತಾಂಶದಲ್ಲಿ ರಾಹುಲ್ ಗಾಂಧಿ ಗೆಲ್ಲದಿದ್ದರೆ ನನ್ನ ರಾಜಕೀಯ ನಿವೃತ್ತಿ ಖಚಿತ ಎಂದ ಕ್ರಿಕೆಟರ್ ಸಿಧು| ಬಿಜೆಪಿ ವಿರುದ್ಧವೂ ಪಂಜಾಬ್ ಸಚಿವನಿಂದ ವಾಗ್ದಾಳಿ

ನವದೆಹಲಿ[ಏ.29]: ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಭಾನುವಾರದಂದು ಮಾತನಾಡುತ್ತಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಿಂದ ಸೋತರೆ ತಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ. 2014ರಲ್ಲಿ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಭಾರೀ ಪೈಪೋಟಿ ನೀಡಿದ್ದ ಬಿಜೆಪಿ ಭ್ಯರ್ಥಿ ಸ್ಮೃತಿ ಇರಾನಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಧ್ಯಕ್ಷನಿಗೆ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ ಎಂಬುವುದು ಗಮನಾರ್ಹ.

Add Asianetnews Kannada as a Preferred SourcegooglePreferred

2014ರಲ್ಲಿ ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದ ನವಜೋತ್ ಸಿಂಗ್ ಸಿಧು 2016ರಲ್ಲಿ ರಾಜ್ಯಸಭೆಗೆ ರಾಜೀನಾಮೆ ನೀಡುವ ಮೂಲಕ ಕಮಲ ಪಾಳಯಕ್ಕೆ ಗುಡ್ ಬೈ ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದರು. ಅಲ್ಲದೇ ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಏನು ಮಾಡಿಲ್ಲ ಎಂದು ಪದೇ ಪದೇ ಆರೋಪಿಸುತ್ತಿದ್ದ ಬಿಜೆಪಿ ಮಾತನ್ನು ತಳ್ಳಿ ಹಾಕುತ್ತಾ, ಕಾಂಗ್ರೆಸ್ ಆಡಳಿತಾವಧಿಯಲ್ಲೇ ಅತಿ ಹೆಚ್ಚು ಆರ್ಥಿಕ ಅಭಿವೃದ್ಧಿಯಾಗಿದೆ, ಸೂಜಿಯಿಂದ ಹಿಡಿದು ವಿಮಾನದವರೆಗೆ ಎಲ್ಲವೂ ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಆಗಿದ್ದು ಎಂಬ ಸಮರ್ಥನೆಯನ್ನೂ ನೀಡಿದ್ದಾರೆ. 

ಇಷ್ಟೇ ಅಲ್ಲದೇ ರಾಯ್ಬರೇಲಿಯಿಂದ ಸಂಸದೆಯಾಗಿರುವ ಸೋನಿಯಾ ಗಾಂಧಿಯಿಂದ ರಾಷ್ಟ್ರಪ್ರೇಮ ಏನು ಎಂಬುವುದನ್ನು ಕಲಿಯಬೇಕು. ರಾಜೀವ್ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ನೇತೃತ್ವ ವಹಿಸಿಕೊಂಡ ಸೋನಿಯಾ, ಕೇಂದ್ರದಲ್ಲಿ 2004ರಿಂದ 2014ರವರೆಗೆ 10 ವರ್ಷ ಅಧಿಕಾರ ನಡೆಸುವಲ್ಲಿ ಯಶಸ್ವಿಯಗಿದ್ದರೆ ಎಂದೂ ಹೇಳಿದ್ದಾರೆ

ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಧು 'ಯಾರೆಲ್ಲಾ ಈ ಪಕ್ಷಕ್ಕೆ ಪ್ರಾಮಾಣಿಕರಾಗಿರುತ್ತಾರೋ ಅವರನ್ನಷ್ಟೇ ದೇಶಪ್ರೇಮಿಗಳೆಂದು ಒಪ್ಪಿಕೊಳ್ಳುತ್ತಾರೆ ಹಾಗೂ ಈ ಪಕ್ಷ ತೊರೆದವರೆಂದು ರಾಷ್ಟ್ರ ವಿರೋಧಿಗಳಂತೆ ಬಿಂಬಿಸುತ್ತಾರೆ' ಎಂದಿದ್ದಾರೆ. ರಪೇಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಕ್ರಿಕೆಟರ್ ಸಿಧು ಈ ವಿವಾದದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸುತ್ತದೆ ಎಂದಿದ್ದಾರೆ.