ಶಿಸ್ತು ಕ್ರಮ ಕೈಗೊಂಡರೆ ಆಶಿರ್ವಾದವೆಂದುಕೊಳ್ಳುತ್ತೇವೆ : ಚೆಲುವರಾಯಸ್ವಾಮಿ
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಂಡ್ಯ ಕಣ ರಂಗೇರುತ್ತಿದೆ. ಇತ್ತ ಸುಮಲತಾಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾದ ಚೆಲುವರಾಯ ಸ್ವಾಮಿ ಪಕ್ಷದ ನಿರ್ಧಾರ ಸ್ವಾಗತಿಸುವುದಾಗಿ ಹೇಳಿದ್ದಾರೆ.
ಮಂಡ್ಯ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಧಾನ ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ, ಮಂಡ್ಯ ಚುನಾವಣೆಯಲ್ಲಿ ನಮ್ಮದೇನೂ ಪಾತ್ರವಿಲ್ಲ. ನಮ್ಮ ಪಾಡಿಗೆ ನಾವಿದ್ದೇವೆ. ಪಕ್ಷ ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಆಶೀರ್ವಾದ ಎಂದು ಸ್ವೀಕರಿಸುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ನೀಡಿರುವ ಸೂಚನೆ ಬಗ್ಗೆ ಕಾರ್ಯಕರ್ತರ ಜತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಚುನಾವಣಾ ಪ್ರಚಾರ ನಡೆಸುವ ಅವಶ್ಯಕತೆ ಇದೆಯೋ ಇಲ್ಲವೋ ನೋಡಬೇಕು. ಅವರಲ್ಲೇ ಮೂರು ಜನ ಮಂತ್ರಿ, ಎಂಟು ಮಂದಿ ಶಾಸಕರು ಇದ್ದಾರೆ. ಮಾಡಿಕೊಂಡು ಹೋಗುತ್ತಾರೆ ಎಂದರು.
ಅತೃಪ್ತರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಮಾತನಾಡಿದ ಅವರು, ನಮ್ಮ ನಾಯಕರು ನಮ್ಮ ವಿರುದ್ಧ ಕ್ರಮ ಕೈಗೊಂಡರೆ ಅದನ್ನು ಆಶೀರ್ವಾದ ಎಂದುಕೊಳ್ಳುತ್ತೇವೆ. ಹೀಗಾಗಿ ಪಕ್ಷ ನಮ್ಮ ಮೇಲೆ ಶಿಸ್ತು ಕ್ರಮ ಕೈಗೊಂಡರೆ ತಪ್ಪು ಎಂದು ಹೇಳುವುದಿಲ್ಲ ಎಂದು ತಿಳಿಸಿದರು.