ಪ್ರಚಾರ ಸಭೆಗೆ ಜನರಿಲ್ಲದೆ ವಾಪಸಾದ ಉಪೇಂದ್ರ
ಪ್ರಚಾರ ಸಭೆಗೆ ಜನರಿಲ್ಲದೆ ವಾಪಸಾದ ಉಪೇಂದ್ರ | ಆಂಜನೇಯಸ್ವಾಮಿ ದೇಗುಲದಲ್ಲಿ ಒಂದೂಕಾಲಾಣೆ ಪೂಜೆ |
ಮದ್ದೂರು (ಏ.02): ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ದಿವಾಕರ್ ಪರ ಪ್ರಚಾರ ನಡೆಸಲು ಆಗಮಿಸಿದ್ದ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಪ್ರಚಾರ ಸಭೆಗೆ ಜನರಿಲ್ಲದ ಕಾರಣ ಬೇಸರಗೊಂಡು ವಾಪಸಾದ ಪ್ರಸಂಗ ನಡೆಯಿತು.
ಪಟ್ಟಣದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದಿಂದ ಹಳೇ ಎಂ.ಸಿ.ರಸ್ತೆ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ಉಪೇಂದ್ರ ರೋಡ್ ಶೋ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುವ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು.
ಬೆಳಗ್ಗೆ 10 ರ ಸುಮಾರಿಗೆ ಬೆಂಗಳೂರಿನಿಂದ ಆಗಮಿಸಿದ ಪಕ್ಷದ ಅಧ್ಯಕ್ಷ ಉಪೇಂದ್ರ, ಪಟ್ಟಣದ ಹೊರ ವಲಯದ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಅಭ್ಯರ್ಥಿ ದಿವಾಕರ್ ಅವರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಧ್ವಜ ಸತ್ಯಾಗ್ರಹ ಸೌಧದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಸಭೆಗೆ ಜನರಿಲ್ಲದ ಕಾರಣ ಬೇಸರಗೊಂಡ ಉಪೇಂದ್ರ ಕೆ.ಎಂ.ದೊಡ್ಡಿ ಮೂಲಕ ಕಾರಿನಲ್ಲಿ ಮಂಡ್ಯಕ್ಕೆ ತೆರಳಿದರು.
ಒಂದೂ ಕಾಲು ರುಪಾಯಿ ಹರಕೆ: ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟಉಪೇಂದ್ರ ಅವರು ಅಲ್ಲಿನ ಸಂಪ್ರದಾಯದಂತೆ ಒಂದೂ ಕಾಲು ರುಪಾಯಿಯ ಕಾಣಿಕೆ ಇಟ್ಟು ಹರಕೆ ಹೊತ್ತರು. ಈ ಹಿಂದೆ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಇಲ್ಲಿಗೆ ಮೂರು ಮಂಗಳವಾರ ಭೇಟಿ ನೀಡಿ ಪುತ್ರನ ಗೆಲುವಿಗಾಗಿ ಒಂದೂ ಕಾಲು ರುಪಾಯಿಯ ಹರಕೆ ಸಲ್ಲಿಸಿದ್ದರು.