ಚುನಾವಣಾ ಕರ್ತವ್ಯದ ವೇಳೆ ಶಿಕ್ಷಕ ಸಾವು!
ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ
ಶಹಾಪುರ[ಏ.23]: ಲೋಕಸಭಾ ಚುನಾವಣಾ ಕರ್ತವ್ಯಕ್ಕೆಂದು ಸುರಪುರದಲ್ಲಿ ನಿಯೋಜನೆಗೊಂಡಿದ್ದ ಶಹಾಪುರದ ಶಿಕ್ಷಕರೊಬ್ಬರು ಮತಯಂತ್ರಗಳ ಪರಿಶೀಲನೆ ವೇಳೆ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶಹಾಪುರ ತಾಲೂಕಿನ ಹಳಿಸಗರ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದ ಶಿವಪುತ್ರಪ್ಪ ಸಂಗಪ್ಪ ಕೂಡ್ಲಿ (48) ಮೃತರು. ಶಿವಪುತ್ರಪ್ಪ ಅವರು ಚುನಾವಣೆ ಹಿನ್ನೆಲೆಯಲ್ಲಿ ಸುರಪುರಕ್ಕೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ನಗರದ ಶ್ರೀಪ್ರಭು ಕಾಲೇಜಿನಲ್ಲಿ ಕರ್ತವ್ಯ ವರದಿ ಮಾಡಿಕೊಂಡ ಅವರು, ಮಸ್ಟರಿಂಗ್ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ.