ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.  ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮತ್ತೊಂದೆಡೆ ಮಂಡ್ಯ ಲೋಕಸಭಾ ರಿಸಲ್ಟ್ ಏನಾಗುತ್ತೆ ಎನ್ನುವ ಚರ್ಚೆಗಳು ಆರಂಭವಾಗಿದ್ದು, ಒಂದೊಂದಾಗಿ ಭವಿಷ್ಯವಾಣಿಗಳು ಸಹ ಹೊರಬೀಳುತ್ತಿವೆ. ಇದರ ಮಧ್ಯೆ ಸ್ವಾಮಿಯೊಬ್ಬರು ಮಂಡ್ಯದಲ್ಲಿ ಗೆಲುವು ಯಾರಿಗೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಮಂಡ್ಯ, [ಏ.11]:  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರದ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. 

Add Asianetnews Kannada as a Preferred SourcegooglePreferred

ಅದರಲ್ಲೂ ಮಂಡ್ಯ ಹೈವೋಲ್ಟೇಜ್ ಕದನದಲ್ಲಿ ವಿಜಯಮಾಲೆ ಯಾರಿಗೆ ಎನ್ನುವ ಚರ್ಚೆಗಳು ರಾಜ್ಯದ ಹಳ್ಳಿ-ಹಳ್ಳಿಗಳಲ್ಲೂ ನಡೆಯುತ್ತಿದ್ದು, ಹೊಟೇಲ್, ಅಂಗಡಿಗಳಲ್ಲಿ ಮಂಡ್ಯದ್ದೇ ಮಾತು.

ಇದರ ಮಧ್ಯೆ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ತಾರೋ..? ಅಥವಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ತಾರೋ..? ಎನ್ನುವ ಬಗ್ಗೆ ಮಂಡ್ಯದ ಶನೇಶ್ವರ ದೇವಾಲಯದ ನಿಂಗಪ್ಪಸ್ವಾಮಿ ಎನ್ನುವುದು ಭವಿಷ್ಯ ಹೇಳಿದ್ದಾರೆ.

ಶರತ್ ಪವಾರ್, ಮೋದಿ, ಯಡಿಯೂರಪ್ಪ, ದೇವೇಗೌಡ ಹಾಗೂ ಕುಮಾರಸ್ವಾಮಿ ಭವಿಷ್ಯ ಹೇಳಿದ್ದ ನಿಂಗಪ್ಪಸ್ವಾಮಿ, ಇಂದು [ಗುರುವಾರ] ಮಂಡ್ಯದ ಸಾರಂಗಿ ಗ್ರಾಮದಲ್ಲಿ ಸುಮಲತಾಗೂ ಭವಿಷ್ಯ ಹೇಳಿದ್ದಾರೆ. 

ಈ‌ ಬಾರಿ ಸುಮಲತಾಗೆ ಗೆಲುವು ಖಚಿತ ಎಂದು ಹಾಳೆಯಲ್ಲಿ ಬರೆದುಕೊಟ್ಟಿದ್ದಾರೆ. ಆದ್ರೆ ಸುಮಲತಾ ಗೆಲುವಿಗೆ ಎರಡು ಕಂಟಕ ಇದೆ ಎಂದು ಹೇಳಿದ್ದು, ಶನಿಮಹಾತ್ಮನಿಗೆ ಪೂಜೆ ಸಲ್ಲಿಸಿದರೆ ಎಲ್ಲವೂ ಸರಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಇಲ್ಲ ಎಂದು ಹೇಳಿರುವ ನಿಂಗಪ್ಪಸ್ವಾಮಿ, ವಯಸ್ಸು ಹಾಗೂ ದುಡುಕುತನವೇ ನಿಖಿಲ್ ಗೆ ಮಾರಕ ಎಂದಿದ್ದಾರೆ.