ನಾಳೆ ಎಲೆಕ್ಷನ್: ಮೋದಿ ಪ್ರಚಾರಕ್ಕೆ ಅಡ್ಡಿಯಿಲ್ಲ ಎಂದ ಚುನಾವಣಾ ಆಯುಕ್ತ!
ಮೊದಲ ಹಂತದ ಚುನಾವಣೆಗೆ ಸಜ್ಜಾಯಿತು ಕರ್ನಾಟಕ| ಮತದಾನಕ್ಕೆ ಸಂಪೂರ್ಣ ಸಜ್ಜಾದ ಚುನಾವಣಾ ಆಯೋಗ| ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಸುದ್ದಿಗೋಷ್ಠಿ| ‘ಎನ್ ಆರ್ ಐ ಮತದಾನ ಕುರಿತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೆಲ್ಲ ಸುಳ್ಳು’| ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಅಡ್ಡಿಯಿಲ್ಲ ಎಂದ ಚುನಾವಣಾ ಆಯೋಗ| ಮತದಾನ ಸಿದ್ಧತೆ ಕುರಿತು ಸಂಪೂರ್ಣ ಮಾಹಿತಿ ನೀಡಿದ ಚುನಾವಣಾ ಆಯುಕ್ತ|
ಬೆಂಗಳೂರು(ಏ.17): ನಾಳೆ(ಏ.18)ರಾಜ್ಯದಲ್ಲಿ ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ರಾಜ್ಯ ಚುನವಣಾ ಆಯುಕ್ತ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಸಿದ್ಧತೆಯ ಕುರಿತು ಮಾಹಿತಿ ನೀಡಿದರು.
ಎನ್ಆರ್ಐಗಳು ಆನ್ಲೈನ್ ಮೂಲಕ ಮತ ಹಾಕಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಕೇವಲ ವದಂತಿ ಎಂದು ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ತಮ್ಮ ಕ್ಷೇತ್ರದಿಂದ ಹೊರಗೆ ಇದ್ದವರು ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮತ ಹಾಕಬಹುದು ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಇದಕ್ಕೆಲ್ಲ ಮತದಾರ ಕಿವಿಗೊಡಬಾರದು ಎಂದು ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಒಟ್ಟು 30,164 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರಿಗೆ ಓಲಾ ಮತ್ತು ಉಬರ್ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಚುನಾವಣೆಗೆ ಒಟ್ಟು 1,54,262 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಈ ಪೈಕಿ 40 ಸಾವಿರ ಪೊಲೀಸರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 1512 ಫ್ಲೈಯಿಂಗ್ ಸ್ಕ್ವಾಡ್ಸ್, 1837 ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್ಸ್, 320 ಅಬಕಾರಿ ಹಾಗೂ 180 ವಾಣಿಜ್ಯ ತೆರಿಗೆ ಸ್ಕ್ವಾಡ್ಸ್ ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಒಟ್ಟು 81.90 ಕೋಟಿ ಮೌಲ್ಯದ ನಗದು ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಒಟ್ಟು 16.36 ಕೋಟಿ ರೂ. ಅಕ್ರಮ ಹಣ ಜಪ್ತಿಯಾಗಿದ್ದು, 36.22 ಕೋಟಿ ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ 11 ಲಕ್ಷ ಮೌಲ್ಯದ 151 ಕೆಜಿ ಮಾದಕ ದ್ರವ್ಯವನ್ನೂ ಕೂಡ ವಶಕ್ಕೆ ಪಡೆಯಲಾಗಿದ್ದು, ಒಟ್ಟು 95,423 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಲಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.
14 ಕ್ಷೇತ್ರಗಳಲ್ಲಿ ಒಟ್ಟು 30164 ಮತಗಟ್ಟೆಗಳು:
ಬೆಂಗಳೂರು ಗ್ರಾಮಾಂತರ-2,672
ಬೆಂಗಳೂರು ಉತ್ತರ-2,656
ಬೆಂಗಳೂರು ಸೆಂಟ್ರಲ್-2,082
ಬೆಂಗಳೂರು ಸೌತ್-2,131
ಎಲ್ಲ ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿಯೂ ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಗುತ್ತದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉತ್ತರ ಕರ್ನಾಟಕದ ಪ್ರವಾಸ ಮಾಡಲಿದ್ದು, ಮೋದಿ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಯಿಲ್ಲ ಎಂದು ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾಳೆ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಪಿರಿಯಡ್ ಇರಲಿದ್ದು, ಎರಡನೇ ಹಂತದ ಮತದಾನವಿರುವ ಉಳಿದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.