ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು
ಮತದಾನ ಮಾಡಲು ಬರುವವರಿಗಾಗಿ ವಿಶೇಷ ರೈಲು ಸೇವೆ| ರಾಜ್ಯದ ದಕ್ಷಿಣ ಭಾಗದಲ್ಲಿ ಮೊದಲ ಹಂತ ಏ.18 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಏ.23 ರಂದು ಮತದಾನ ಮಾಡಲು ಹೋಗುವವರಿಗೆ ಟ್ರೈನ್ ಗಳ ವ್ಯವಸ್ಥೆ| ನೈರುತ್ಯ ರೈಲ್ವೆ ವಲುದಿಂದ 3 ಟ್ರೈನ್ ಗಳ ವ್ಯವಸ್ಥೆ| ಈ ವಿಶೇಷ ಟ್ರೈನ್ ಗಳ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ.
ಬೆಂಗಳೂರು, [ಏ.14]: ಲೋಕಸಭೆ ಚುನಾವಣೆ ಪ್ರಯುಕ್ತ ನೈಋುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮೂರು ಹೆಚ್ಚುವರಿ ರೈಲುಗಳ ಸೇವೆ ನೀಡಿದೆ.
ರಾಜ್ಯದ ದಕ್ಷಿಣ ಭಾಗದಲ್ಲಿ ಮೊದಲ ಹಂತ ಏ.18 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಏ.23 ರಂದು ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ವೋಟ್ ಮಾಡಲು ತೆರಳುವವರಿಗೆ ಯಾವುದೇ ತೊಂದರೆಯಾಗದಂತೆ ಮಲೆನಾಡು ಭಾಗಕ್ಕೆ ಯಶವಂತಪುರ-ಕಾರವಾರ ರೈಲು, ಉತ್ತರ ಕರ್ನಾಟಕ ಭಾಗಕ್ಕೆ ಯಶವಂತಪುರ-ಬೆಳಗಾವಿಗೆ ಎರಡು ಒಟ್ಟು ಮೂರು ರೈಲುಗಳು ಸಂಚರಿಸಲಿವೆ.
ಜನರ ಅನುಕೂಲಕ್ಕಾಗಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಈ ಮೂರು ಹೆಚ್ಚುವರಿ ರೈಲುಗಳನ್ನು ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ. ಹಾಗಾದ್ರೆ ಮೂರು ವಿಶೇಷ ಟ್ರೈನ್ ಗಳ ವೇಳಾಪಟ್ಟಿ ಈ ಕೆಳಗಿನಂತಿದೆ.
ಯಶವಂತಪುರ-ಕಾರವಾರ ರೈಲು (06557)
ಏ.17 ರಂದು ರಾತ್ರಿ 10 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಯಶವಂತಪುರ-ಕಾರವಾರ ರೈಲು (06557) ಮರುದಿನ ಮಧ್ಯಾಹ್ನ 3 ಗಂಟೆಗೆ ಕಾರವಾರ ತಲುಪಲಿದೆ. ಈ ರೈಲು ಚಿಕ್ಕಬಾಣಾವಾರ, ನೆಲಮಂಗಲ, ಕುಣಿಗಲ್, ಚನ್ನರಾಯಪಟ್ಟಣ, ಬಂಟ್ವಾಳ, ಮಂಗಳೂರು, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ ಮಾರ್ಗವಾಗಿ ಸಂಚರಿಸಲಿದೆ. ಏ.18 ರಂದು ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡಲಿರುವ ರೈಲು (06558) ಮರುದಿನ ಬೆಳಗ್ಗೆ 10.35 ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ-ಬೆಳಗಾವಿಗೆ ಮೊದಲ ಟ್ರೈನ್ (06581)
ಏ.18 ರಂದು ರಾತ್ರಿ 11 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಯಶವಂತಪುರ-ಬೆಳಗಾವಿ ರೈಲು (06581) ಮರುದಿನ ಬೆಳಗ್ಗೆ 11.15 ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡ ಮೂಲಕ ಸಾಗಲಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್ [06582]
ಏ.21 ರಂದು ಸಂಜೆ 5 ಗಂಟೆಗೆ ಬೆಳಗಾವಿಯಿಂದ ಹೊರಡಲಿರುವ ಸಂಖ್ಯೆ 06582 ಯ ರೈಲು ಮರುದಿನ ಮುಂಜಾನೆ 5 ಗಂಟೆಗೆ ಯಶವಂತಪುರಕ್ಕೆ ಬಂದು ತಲುಪಲಿದೆ.
ಯಶವಂತಪುರ-ಬೆಳಗಾವಿಗೆ 2ನೇ ಟ್ರೈನ್ (06583)
ಏ.22 ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡಲಿರುವ ಯಶವಂತಪುರ-ಬೆಳಗಾವಿ ರೈಲು (06583) ಮರುದಿನ ಬೆಳಗ್ಗೆ 11.15 ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್ (06584]
ಏ.23 ರಂದು ಸಂಜೆ 7 ಗಂಟೆಗೆ ಬೆಳಗಾವಿಯಿಂದ ಹೊರಡಲಿರುವ ರೈಲು (06584) ಮರುದಿನ ಮುಂಜಾನೆ 6.20 ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ. ಒಟ್ಟಿನಲ್ಲಿ ಎಲ್ಲರೂ ಮತದಾನ ಮಾಡಬೇಕೆಂಬ. ಮತದಾನ ಮಾಡಲು ತಮ್ಮ-ತಮ್ಮ ಊರಿಗೆ ಹೋಗುವವರಿಗೆ ಅನುಕೂಲವಾಗಲಿ ಎನ್ನುವ ನೈರುತ್ಯ ರೈಲ್ವೆ ವಲಯದ ನಿರ್ಧಾರ ನಿಜಕ್ಕೂ ಶ್ಲಾಘನೀಯ.
ಇಷ್ಟು ಅನುಕೂಲ ಮಾಡಿಕೊಟ್ಟಿರುವ ರೈಲ್ವೆ ಇಲಾಖೆಗೆ ನಾವು ಮತದಾನ ಮಾಡುವ ಮೂಲಕ ಕೃತಜ್ಞೆತೆಗಳನ್ನು ಸಲ್ಲಿಸೋಣ. ಹಾಗಾಗಿ ಬೆಂಗಳೂರಿನಲ್ಲಿರುವ ಪರಸ್ಥಳದವರು ತಮ್ಮ-ತಮ್ಮ ಊರುಗಳಿಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಿ.
ರೈಲಿನ ಸಮಯದ ಬಗ್ಗೆ ಗೊಂದಲವಿದ್ದರೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.