'ಮೋದಿ ಸಾಧನೆ ಇಲ್ಲ, ಯಡಿಯೂರಪ್ಪಗೆ ಮರ್ಯಾದೆ ಇಲ್ಲ'
5 ವರ್ಷದಲ್ಲಿ ಮೋದಿ ಸಾಧನೆ ಶೂನ್ಯ| ಯಡಿಯೂರಪ್ಪಗೆ ಮಾನ, ಮರ್ಯಾದೆಯೇ ಇಲ್ಲ| ಮೋದಿ, ಬಿಎಸ್ವೈಗೆ ಸಿದ್ದು ಚಾಟಿ|
ಬೆಳಗಾವಿ/ದಾವಣಗೆರೆ[ಏ.21]: ಐದು ವರ್ಷದಲ್ಲಿ ಪ್ರಧಾನಿ ಮೋದಿ ಅವರ ಸಾಧನೆ ಶೂನ್ಯ. ಮನ್ ಕೀ ಬಾತ್ ಬಿಟ್ಟು ಕಾಮ್ ಕೀ ಬಾತ್ ಮಾಡುವಂತೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ, ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 23ರ ನಂತರ ಮೈತ್ರಿ ಸರ್ಕಾರ ಪತನವಾಗುತ್ತದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿಯ ಅನೇಕ ಮುಖಂಡರು ಹೇಳುತ್ತಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಇದೇ ರೀತಿ ಹೇಳಿಕೊಂಡೇ ಬರುತ್ತಿದ್ದಾರೆ. ಮೈತ್ರಿ ಸರ್ಕಾರ ಪತನವಾಯ್ತೇ? ಒಂದು ವೇಳೆ ಮೇ 23ರಂದು ಪತನ ಆಗುವುದಿದ್ದರೆ ಅದು ಮೋದಿ ಸರ್ಕಾರ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 5 ವರ್ಷ ಅವಧಿ ಪೂರ್ಣಗೊಳಿಸಲಿದೆ. ಯಡಿಯೂರಪ್ಪ ಅವರಿಗೆ ಮಾನ- ಮರ್ಯಾದೆಯೇ ಇಲ್ಲ. ಎರಡು ದಿನಕ್ಕೆ ಮುಖ್ಯಮಂತ್ರಿಯಾದರು, ಆಮೇಲೆ ಬಹುಮತ ಸಾಬೀತುಪಡಿಸುವಲ್ಲಿ ಫೇಲ್ ಆದರು. ಯಡಿಯೂರಪ್ಪ ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದರು.
ಬಿಜೆಪಿ ಕಡೆಗೆ ಬೆರಳು ಮಾಡಿದರೆ ಕೈ ಕಟ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಮನೋಜ ಸಿನ್ಹಾ ಹೇಳಿಕೆಗೆ ಇದೇ ವೇಳೆ ತಿರುಗೇಟು ನೀಡಿದ ಸಿದ್ದು, ಬಿಜೆಪಿಯವರಿಗೆ ಹೊಡಿ, ಬಡಿ, ಕಡಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು. ಮಾನವೀಯತೆ ಇಲ್ಲದವರು. ಯಾರಿಗೆ ಮಾನವೀಯತೆ ಇಲ್ಲವೋ ಅವರು ರಾಕ್ಷಸ ಗುಣದವರು ಎಂದು ಕಿಡಿಕಾರಿದರು.