5 ವರ್ಷದಲ್ಲಿ ಮೋದಿ ಸಾಧನೆ ಶೂನ್ಯ| ಯಡಿಯೂರಪ್ಪಗೆ ಮಾನ, ಮರ್ಯಾದೆಯೇ ಇಲ್ಲ| ಮೋದಿ, ಬಿಎಸ್‌ವೈಗೆ ಸಿದ್ದು ಚಾಟಿ| 

ಬೆಳಗಾವಿ/ದಾವಣಗೆರೆ[ಏ.21]: ಐದು ವರ್ಷದಲ್ಲಿ ಪ್ರಧಾನಿ ಮೋದಿ ಅವರ ಸಾಧನೆ ಶೂನ್ಯ. ಮನ್‌ ಕೀ ಬಾತ್‌ ಬಿಟ್ಟು ಕಾಮ್‌ ಕೀ ಬಾತ್‌ ಮಾಡುವಂತೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Add Asianetnews Kannada as a Preferred SourcegooglePreferred

ಬೆಳಗಾವಿ, ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 23ರ ನಂತರ ಮೈತ್ರಿ ಸರ್ಕಾ​ರ​ ಪತ​ನ​ವಾ​ಗು​ತ್ತ​ದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿ ಬಿಜೆಪಿಯ ಅನೇಕ ಮುಖಂಡರು ಹೇಳುತ್ತಿದ್ದಾರೆ. ಮೈತ್ರಿ ಸರ್ಕಾರ ಅಸ್ತಿ​ತ್ವಕ್ಕೆ ಬಂದ ದಿನ​ದಿಂದಲೂ ಇದೇ ರೀತಿ ಹೇಳಿ​ಕೊಂಡೇ ಬರು​ತ್ತಿ​ದ್ದಾರೆ. ಮೈತ್ರಿ ಸರ್ಕಾರ ಪತ​ನ​ವಾಯ್ತೇ? ಒಂದು ವೇಳೆ ಮೇ 23ರಂದು ಪತನ ಆಗುವುದಿದ್ದರೆ ಅದು ಮೋದಿ ಸರ್ಕಾರ ಎಂದು ವ್ಯಂಗ್ಯವಾಡಿದರು.

ಕಾಂಗ್ರೆ​ಸ್‌-ಜೆಡಿ​ಎಸ್‌ ಸಮ್ಮಿಶ್ರ ಸರ್ಕಾರ 5 ವರ್ಷ ಅವಧಿ ಪೂರ್ಣ​ಗೊ​ಳಿ​ಸ​ಲಿದೆ. ಯಡಿ​ಯೂ​ರ​ಪ್ಪ ಅವರಿಗೆ ಮಾನ- ಮರ್ಯಾ​ದೆಯೇ ಇಲ್ಲ. ಎರಡು ದಿನಕ್ಕೆ ಮುಖ್ಯ​ಮಂತ್ರಿ​ಯಾದರು, ಆಮೇಲೆ ಬಹು​ಮತ ಸಾಬೀ​ತು​ಪ​ಡಿ​ಸು​ವಲ್ಲಿ ಫೇಲ್‌ ಆದರು. ಯಡಿ​ಯೂ​ರ​ಪ್ಪ ಅವರಿಗೆ ಅಧಿ​ಕಾ​ರದ ಹುಚ್ಚು ಹಿಡಿ​ದಿದೆ ಎಂದರು.

ಬಿಜೆಪಿ ಕಡೆಗೆ ಬೆರಳು ಮಾಡಿದರೆ ಕೈ ಕಟ್‌ ಮಾಡುತ್ತೇವೆ ಎಂದು ಕೇಂದ್ರ ಸಚಿವ ಮನೋಜ ಸಿನ್ಹಾ ಹೇಳಿಕೆಗೆ ಇದೇ ವೇಳೆ ತಿರುಗೇಟು ನೀಡಿದ ಸಿದ್ದು, ಬಿಜೆಪಿಯವರಿಗೆ ಹೊಡಿ, ಬಡಿ, ಕಡಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು. ಮಾನವೀಯತೆ ಇಲ್ಲದವರು. ಯಾರಿಗೆ ಮಾನವೀಯತೆ ಇಲ್ಲವೋ ಅವರು ರಾಕ್ಷಸ ಗುಣದವರು ಎಂದು ಕಿಡಿಕಾರಿದರು.