ಮಾಲೆಗಾಂವ್ ಸ್ಪೋಟದ ಆರೋಪಿ ಸಾದ್ವಿ ಪ್ರಜ್ಞಾ ಬಿಜೆಪಿಗೆ: ಸಿಂಗ್ ವಿರುದ್ಧ ಕಣಕ್ಕೆ?
ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಬಿಜೆಪಿ ತೆಕ್ಕೆಗೆ| ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ
ಭೋಪಾಲ್[ಏ.17]: ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗಲೂ ಗೊಂದಲಗಳು ಮುಂದುವರೆದಿವೆ. ಲಭ್ಯವಾದ ಮಾಹಿತಿ ಅನ್ವಯ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿಯು ಸಾಧ್ವಿ ಪ್ರಜ್ಞಾರನ್ನು ಚುನಾವಣಾ ಅಖಾಡಕ್ಕಿಳಿಸುವ ಸಾಧ್ಯತೆಗಳಿವೆ.
ಬುಧವಾರದಂದು ಮಾಲೆಗಾಂವ್ ಸ್ಟೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಕಚೇರಿ ತಲುಪುತ್ತಿದ್ದಂತೆಯೇ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಯುವ ಮಾತುಗಳು ಜೋರಾಗಿವೆ. ಸಾಧ್ವಿ ಪ್ರಜ್ಞಾರನ್ನು ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತಾಗಿ ಕಚೇರಿಯ ಕೋಣೆಯೊಂದರಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿದ್ದಾರೆನ್ನಲಾಗಿದೆ. ಈ ಸಭೆಯಲ್ಲಿ ರಾಮ್ ಲಾಲ್, ಶಿವರಾಜ್ ಸಿಂಗ್ ಸುಹಾಸ್ ಭಗತ್, ಪ್ರಭಾತ್ ಝಾ ಸೇರಿದಂತೆ ಇನ್ನೂ ಹಲವು ನಾಯಕರು ಭಾಗಿಯಾಗಿದ್ದರು.
ಸದ್ಯ ಬಿಜೆಪಿ ಪಕ್ಷದ ಪರವಾಗಿ ಬೋಪಾಲ್ ಕ್ಷೇತ್ರದಿಂದ ಸ್ಪರ್ಧಿಸುವವರು ಯಾರು ಎಂಬ ಮಾಹಿತಿ ಸಿಗಬೇಕಿದೆ. ಬಿಜೆಪಿ ಪ್ರಜ್ಞಾರನ್ನೇ ಕಣಕ್ಕಿಳಿಸಬಹುದು ಎಂಬ ಅನುಮಾನ ವ್ಯಕ್ತವಾಗಿದೆ. 2008 ಮಾಲೆಗಾಂವ್ ಸ್ಫೋಟ ಪ್ರಕರಣ ಆರೋಪಿಯಾಗಿ ಹೆಚ್ಚು ಪರಿಚಿತರಾದ ಸಾಧ್ವಿ ಪ್ರಜ್ಞಾ ಮಧ್ಯ ಪ್ರದೇಶದ ಮಧ್ಯಮ ವರ್ಗದ ಕುಟುಂಬದವರು. ಆರಂಭದಲ್ಲಿ ವಿಶ್ವ ಹಿಂದೂ ಪರಿಷತ್ ನಲ್ಲಿ ಸಕ್ರಿಯರಾಗಿದ್ದ ಪ್ರಜ್ಞಾ ಬಳಿಕ ಸನ್ಯಾಸತ್ವ ಸ್ವೀಕರಿಸುತ್ತಾರೆ.