ಮತದಾನದಂದೇ ರಾಜೀನಾಮೆ ಬಾಂಬ್ : ಜಾರಕಿಹೊಳಿ ಜೊತೆ 10 ಶಾಸಕರು ಬಿಜೆಪಿಗೆ?
ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ಹೊಸ ಬಾಂಬ್ ಸ್ಫೋಟಿಸಲಾಗಿದೆ. ಶೀಘ್ರವೇ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ.
ಬೆಳಗಾವಿ : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಏರಿದ ಬೆನ್ನಲ್ಲೇ ಬಿಜೆಪಿ ಮುಖಂಡರೋರ್ವರು ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಕಾಂಗ್ರೆಸ್ ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿ ಮೇ 25ರ ಬಳಿಕ ರಾಜೀನಾಮೆ ನೀಡಲಿದ್ದಾರೆ. ಇವರೊಂದಿಗೆ ಕಾಂಗ್ರೆಸ್ 10 ಶಾಸಕರು ರಾಜೀನಾಮೆ ನೀಡಲಿದ್ದು, ಮೇ 30ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಬಿಜೆಪಿ ಮುಖಂಡ ರವಿ ಹಂಜಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಬಂದ 2 ದಿನಕ್ಕೆ ಮೈತ್ರಿ ಸರ್ಕಾರ ಪತನವಾಗಲಿದೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ಬಿಜೆಪಿ ಸರ್ಕಾರ ರಚನೆಗೆ ಎಲ್ಲ ರೀತಿಯ ತಯಾರಿ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್.ಕಾಂ ಗೆ ಜಾರಕಿಹೊಳಿ ಆಪ್ತ, ಬಿಜೆಪಿ ಮುಖಂಡ ರವಿ ಹಂಜಿ ಹೇಳಿಕೆ ನೀಡಿದ್ದಾರೆ.
ಮತ್ತೆ ವಿಧಾನಸಭೆ ಚುನಾವಣೆ ನಡೆಸಲು ಅವಕಾಶ ನೀಡುವುದಿಲ್ಲ. ಆಪ್ತ ಮುಖಂಡರು, ಕಾರ್ಯಕರ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಸದ್ಯ ಜಾರಕಿಹೊಳಿ ಸಹೋದರರ ತಿಕ್ಕಾಟ ತಾರಕಕ್ಕೆ ಏರಿದ್ದು, ಇದೀಗ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ.