ನೀತಿ ಸಂಹಿತೆ ಕೇಸಲ್ಲಿ ಗೌರ್ನರ್ಗೆ ಸಂಕಷ್ಟ
ದೇಶದ ಒಳಿತಿಗಾಗಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆ ಅನಿವಾರ್ಯ ಎಂಬ ವಿವಾದಿತ ಹೇಳಿಕೆ ನೀಡಿದ್ದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ಸಿಂಗ್, ಇದೀಗ ಶಿಸ್ತುಕ್ರಮದ ಭೀತಿ ಎದುರಿಸುವಂತಾಗಿದೆ.
ನವದೆಹಲಿ: ದೇಶದ ಒಳಿತಿಗಾಗಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆ ಅನಿವಾರ್ಯ ಎಂಬ ವಿವಾದಿತ ಹೇಳಿಕೆ ನೀಡಿದ್ದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ಸಿಂಗ್, ಇದೀಗ ಶಿಸ್ತುಕ್ರಮದ ಭೀತಿ ಎದುರಿಸುವಂತಾಗಿದೆ. ಕಲ್ಯಾಣ್ ಸಿಂಗ್ ವಿರುದ್ಧ ಚುನಾವಣಾ ಆಯೋಗ ನೀಡಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಕುರಿತ ವರದಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ.
ಒಂದು ವೇಳೆ ಈ ವರದಿಯಲ್ಲಿ ರಾಜ್ಯಪಾಲರು ನೀತಿ ಸಂಹಿತಿ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿ, ಶಿಸ್ತು ಕ್ರಮಕ್ಕೆ ಸೂಚಿಸಿದರೆ ಅದು ಕಲ್ಯಾಣ್ಸಿಂಗ್ ಮತ್ತು ಬಿಜೆಪಿ ಪಾಲಿಗೆ ಭಾರೀ ಮುಜುಗರ ತರಲಿದೆ. ಅಲ್ಲದೆ ದೇಶದ ಇತಿಹಾಸದಲ್ಲೇ ರಾಜ್ಯಪಾಲರೊಬ್ಬರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಮೊದಲ ಪ್ರಕರಣ ಇದಾಗಲಿದೆ ಎನ್ನಲಾಗಿದೆ.
ಏನಾಗಿತ್ತು?: ಮಾ.25ರಂದು ಉತ್ತರಪ್ರದೇಶದ ಅಲಿಘಡದಲ್ಲಿ ಮಾತನಾಡಿದ್ದ ಕಲ್ಯಾಣ್ಸಿಂಗ್, ‘ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆ, ದೇಶ ಮತ್ತು ಸಮಾಜಕ್ಕೆ ಅವಶ್ಯಕ. ಪಕ್ಷದ ಪ್ರತಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ನಾವೆಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ನಾವು ಬಿಜೆಪಿ ಗೆಲುವನ್ನು ಬಯಸುತ್ತೇವೆ. ಮೇ 23ರಂದು ಮೋದಿ ಪ್ರಧಾನಿಯಾಗುವುದನ್ನು ನಾವೆಲ್ಲಾ ಬಯಸುತ್ತೇವೆ’ ಎಂದು ಹೇಳಿದ್ದರು. ಈ ಮಾತುಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಬಗ್ಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ರಾಷ್ಟ್ರಪತಿಗಳಿಗೆ ವರದಿ ರವಾನಿಸಿತ್ತು.