ನೆಲ, ಜಲ, ಆಗಸದಿಂದ ರಾಹುಲ್‌ ಹಗರಣಗಳು ಬೆಳಕಿಗೆ: ಮೋದಿ| ನನ್ನತ್ತ ಕೆಸರು ಎರಚಿದಷ್ಟು‘ಕಮಲ’ ಅರಳುತ್ತೆ| ನನ್ನ ಹೆಸರು ಕೆಡಿಸಲು ಹೋದಾಗಲೆಲ್ಲಾ ಅವರ ಬಣ್ಣವೇ ಬಯಲು

ನವದೆಹಲಿ[ಮೇ.06]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಉದ್ಯಮ ಪಾಲುದಾರರೊಬ್ಬರಿಗೆ ಸ್ಕಾರ್ಪಿನ್‌ ಸಬ್‌ಮರೀನ್‌ ಉಪಗುತ್ತಿಗೆ ದೊರೆತಿದೆ ಎಂಬ ವರದಿಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರ ಹಗರಣಗಳು ನೆಲ, ಜಲ ಹಾಗೂ ಆಕಾಶದಿಂದಲೂ ಬಯಲಾಗುತ್ತಿವೆ. ಅವರು ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದಾಗಲೆಲ್ಲಾ ಅವರ ಬಣ್ಣವೇ ಬಯಲಾಗುತ್ತಿದೆ. ಅವರು ಕೆಸರು ಎರಚಿದಷ್ಟೂಕಮಲ ಅರಳುತ್ತದೆ ಎಂದು ಹರಿಹಾಯ್ದಿದ್ದಾರೆ.

Add Asianetnews Kannada as a Preferred SourcegooglePreferred

ಮಧ್ಯಪ್ರದೇಶದ ಸಾಗರದಲ್ಲಿ ಲೋಕಸಭಾ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಬ್ಯಾಕ್‌ಆಫ್ಸ್‌ ಎಂಬ ಕಂಪನಿಯನ್ನು ಇಂಗ್ಲೆಂಡ್‌ನಲ್ಲಿ ಹೊಂದಿದ್ದರು. ಅದು 2009ರಲ್ಲಿ ಬಂದ್‌ ಆಯಿತು. 2011ರಲ್ಲಿ ಆ ಕಂಪನಿಯ ಪಾಲುದಾರರೊಬ್ಬರಿಗೆ ಸಬ್‌ ಮರೀನ್‌ ಗುತ್ತಿಗೆ ದೊರೆಯಿತು. ಆಗ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಬ್ಯಾಕ್‌ಆಫ್ಸ್‌ ಕಂಪನಿ ಪಾಲುದಾರನಿಗೆ ಹೇಗೆ ಗುತ್ತಿಗೆ ದೊರೆಯಿತು? ರಕ್ಷಣಾ ಗುತ್ತಿಗೆಯಲ್ಲಿ ಆತನಿಗೆ ಅನುಭವ ಏನಿತ್ತು ಎಂದು ಮೋದಿ ಪ್ರಶ್ನೆ ಮಾಡಿದರು.

ಮೊದಲು ಬೋಫೋ​ರ್ಸ್ಸ್ ಗನ್‌, ಬಳಿಕ ಹೆಲಿಕಾಪ್ಟರ್‌ ಮತ್ತೆ ಇದೀಗ ಸಬ್‌ಮರೀನ್‌, ಹೀಗೆ ಅಗೆದಷ್ಟೂಅದು ಆಳವಾಗಿ ಹೋಗುತ್ತಲೇ ಇದೆ. ಅದು ಜಲವಾಗಿರಬಹುದು, ಆಕಾಶವಾಗಿರಬಹುದು ಅತವಾ ಭೂಮಿಯಾಗಿರಬಹುದು, ನಾಮ್‌ದಾರ್‌ಗಳ ಕೃತ್ಯಗಳು ಹೊರಬರುತ್ತಲೇ ಇವೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದ 10 ವರ್ಷದ ಯುಪಿಎ ಆಡಳಿತವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ‘2004ರಲ್ಲಿ ಕಾಂಗ್ರೆಸ್‌ನ ಯುವರಾಜ ಇನ್ನೂ ಸಿದ್ಧವಾಗಿರಲಿಲ್ಲ ಮತ್ತು ಅವರನ್ನು ತರಬೇತುಗೊಳಿಸುವ ಎಲ್ಲಾ ಯತ್ನಗಳೂ ವಿಫಲವಾಯ್ತು. ಹೀಗಾಗಿ ಕುಟುಂಬ ಆಪ್ತ ಸಿಂಗ್‌ರನ್ನು ಕಾಂಗ್ರೆಸ್‌ ಪ್ರಧಾನಿಯಾಗಿ ಪ್ರತಿಷ್ಠಾಪಿಸಿತು. ಪರಿಣಾಮ 21ನೇ ಶತಮಾನದ ಒಂದಿಡೀ ದಶಕವನ್ನು ಭಾರತ ಕಳೆದುಕೊಳ್ಳಬೇಕಾಗಿ ಬಂತು ಎಂದು ಕಿಡಿಕಾರಿದರು.