ನಾನು ಕಾಶಿ ವಾಸಿ, ಮತ್ತೊಮ್ಮೆ ಹರಸಿ| ವಾರಾಣಸಿ ಮತದಾರರಿಗೆ ಪ್ರಧಾನಿ ಮೋದಿ ಮನವಿ| ಮತದಾರರ ಸೆಳೆಯಲು ಮೋದಿ ಭಾವನಾತ್ಮಕ ವಿಡಿಯೋ

ಲಖನೌ[ಮೇ.15]: 2019ರ ಲೋಕಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಚುನಾವಣೆಗೆ ದಿನಗಣನೆ ಬಾಕಿಯಿರುವ ಬೆನ್ನಲ್ಲೇ, 2ನೇ ಅವಧಿಗೆ ಲೋಕಸಭೆ ಪ್ರವೇಶ ಬಯಸಿ ಸ್ಪರ್ಧೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ‘ಕಾಶಿವಾಸಿ’ ಎಂದು ಬಣ್ಣಿಸಿಕೊಂಡಿದ್ದಾರೆ. ಅಲ್ಲದೆ, ವಾರಾಣಸಿಗೆ ಸೇವೆ ಸಲ್ಲಿಸುವ ಮತ್ತೊಂದು ಅವಕಾಶಕ್ಕಾಗಿ ಜನತೆ ಆಶಿರ್ವಾದ ಮಾಡಬೇಕು ಎಂದು ಮೋದಿ ಅವರು ಭಾವನಾತ್ಮಕವಾಗಿ ಕೋರಿಕೊಂಡಿದ್ದಾರೆ.

ಈ ಬಗ್ಗೆ ಮಂಗಳವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ಅವರು, ‘ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವಯ ಬಾರಿ ಇಲ್ಲಿಗೆ ಬಂದಿದ್ದೇನೆ. ದೇಗುಲಗಳ ನಗರ ಎಂದೇ ಖ್ಯಾತವಾಗಿರುವ ಕಾಶಿಯು ನನ್ನ ಸ್ಫೂರ್ತಿಯ ಸೆಲೆಯಾಗಿದೆ. ಅಲ್ಲದೆ, ಈ ನಗರಕ್ಕೆ ಬಂದು ಬಾರಿ ಭೇಟಿ ಕೊಟ್ಟಯಾವುದೇ ವ್ಯಕ್ತಿಯನ್ನಾಗಲೀ ಈ ನಗರದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ,’ ಎಂದು ಪ್ರತಿಪಾದಿಸಿದ್ದಾರೆ.

Scroll to load tweet…

ಸರಸ್ವತಿಯೇ ನೆಲೆಯೂರಿರುವ ಈ ನಾಡಿನ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವಾಗಿತ್ತು. ಕಳೆದೈದು ವರ್ಷಗಳಲ್ಲಿ ವಾರಾಣಸಿ ಹಾಗೂ ಅದರ ಪಕ್ಕದ ನಗರಗಳಲ್ಲಿ ಹೆದ್ದಾರಿ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಆದಾಗ್ಯೂ, ಮಾಡಬೇಕಿರುವ ಹಲವು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಲು ಮತ್ತೊಂದು ಅವಕಾಶ ನೀಡಬೇಕು. ಕಾಶಿಯ ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಸಹ ನರೇಂದ್ರ ಮೋದಿ ಎಂದುಕೊಂಡು ಚುನಾವಣೆ ಎದುರಿಸುತ್ತೀರಿ ಎಂಬುದು ನನಗೆ ಗೊತ್ತು. ಹಾಗಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಚ್ಚು ಮತದಾರರು ಭಾಗಿಯಾಗಬೇಕು ಎಂದು ಮೋದಿ ಅವರು ಕರೆಕೊಟ್ಟರು.