ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ನಾಯಕರ ನಡುವಿನ ಮುನಿಸು ಬೆಳಖಿಗೆ ಬರುತ್ತಿವೆ. ಇತ್ತ ಕೈ ತೊರೆದು ಬಿಜೆಪಿ ಅಭ್ಯರ್ಥಿಯಾಘಿರುವ ಉಮೇಶ್ ಜಾಧವ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಎದುರುಬದುರಾದರೂ ಕೂಡ ಮುಖವನ್ನೂ ನೋಡದ ಘಟನೆ ನಾಮಪತ್ರ ಸಲ್ಲಿಕೆ ವೇಳೆ ನಡೆಯಿತು. 

ಕಲಬುರಗಿ: ಲೋಕಸಭೆ ಕಣದಲ್ಲಿರುವ ಕಾಂಗ್ರೆಸ್ಸಿನ ಹುರಿಯಾಳು ಡಾ. ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ಉಮೇದುವಾರ ಡಾ. ಜಾಧವ್ ಗುರುವಾರ ಚುನಾವಣಾಧಿಕಾರಿ ಕಚೇರಿಯಲ್ಲಿ ಮುಖಾಮುಖಿಯಾಗುವ ಸಂದರ್ಭ ಕೂಡಿಬಂತು. ಈ ವೇಳೆ ಇಬ್ಬರೂ ನಾಯಕರು ಒಬ್ಬರಿಗೊಬ್ಬರು ಮುಖಕೊಟ್ಟು ನೋಡುವ ಅಥವಾ ಮಾತನಾಡುವ ಗೋಜಿಗೂ ಹೋಗದೆ ತಮ್ಮ ಪಾಡಿಗೆ ತಾವು ಬೆಂಬಲಿಗರೊಂದಿಗೆ ಪ್ರತ್ಯೇಕ ಕೋಣೆಗಳಲ್ಲಿ ಕುಳಿತಿದ್ದರು.

Add Asianetnews Kannada as a Preferred SourcegooglePreferred

ಡಾ. ಉಮೇಶ ಜಾಧವ್ ಗುರುವಾರ ನಾಮಪತ್ರ ಕಾಗದಪತ್ರಗಳೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಇವರೊಂದಿಗೆ ಸ್ಥಳೀಯ ಶಾಸಕರಾದ ದತ್ತು ಪಾಟೀಲ್ ಸೇರಿದಂತೆ ಅನೇಕ ಬಿಜೆಪಿ ನಾಯಕರಿದ್ದರು. ಇದೇ ವೇಳೆ ಖರ್ಗೆ ತಮ್ಮ ಬೆಂಬಲಿಗರು, ಶಾಸಕರೊಂದಿಗೆ ಡಿಸಿ ಕಚೇರಿಗೆ ಆಗಮಿಸಿದರು.

ಈ ವೇಳೆ ಡಾ. ಖರ್ಗೆ, ಡಾ. ಜಾಧವ್ ಮುಖಾಮುಖಿಯಾಗಲು ಸಾಕಷ್ಟು ಅವಕಾಶಗಳಿದ್ದರೂ ಇಬ್ಬರೂ ನಾಯಕರು, ಅವರ ಬೆಂಬಲಿಗರು ಅದಕ್ಕೆ ಅವಕಾಶ ದೊರಕದಂತೆ ಬೇರೆ ಬೇರೆ ಕೋಣೆಗಳಲ್ಲಿ ಕುಳಿತುಬಿಟ್ಟು ತಮ್ಮ ನಾಮಪತ್ರ ಹಾಕುವ ಸರತಿಗೆ ಕಾಯ್ದರು.

ಡಾ. ಖರ್ಗೆ ನಾಮಪತ್ರ ಸಲ್ಲಿಕೆಗೆ ಬಂದವರೇ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕುಳಿತು 30 ನಿಮಿಷ ಕಾದರು, ಡಾ. ಜಾಧವ್ ಚಿಕ್ಕ ಸಭಾಂಗಣದ ಪಕ್ಕದಲ್ಲೇ ಇರುವ ಕೋಣೆಯಲ್ಲಿ ಕುಳಿತು ತಮ್ಮ ಸರತಿಗೆ ಕಾಯ್ದರು.