ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಬಿಜೆಪಿ ಬಾರಿ ಅಂತರದಿಂದ ಸೋಲಲಿದೆ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ. 

ಬಾಗಲಕೋಟೆ :  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭಾಷಣದ ಮೇಲೆ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯವಾಗಿಲ್ಲ‌. ಒಬ್ಬ ಪ್ರಧಾನಿ ಪ್ರಾದೇಶಿಕವಾಗಿ ಮಾತನಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಚುನಾವಣೆ ಸಂದರ್ಭದಲ್ಲಿ ಹುಸಿ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. 

ದೇವೇಗೌಡರು ಪ್ರಧಾನಿಯಾಗಿದ್ದಾಗ ಆಲಮಟ್ಟಿ ಜಲಾಶಯ ಯೋಜನೆ ಜಾರಿಗೊಳಿಸಿದ್ದರು. ಆದರೆ ಬಿಜೆಪಿ ಸರ್ಕಾರದಿಂದ ಯಾವುದೇ ಅನುದಾನವೂ ಕೂಡ ಬಂದಿಲ್ಲ ಎಂದು ಹರಿಹಾಯ್ದರು. 

ಮೈತ್ರಿ ಸರ್ಕಾರ ಬಂದ ನಂತರ ರಾಜ್ಯಕ್ಕೆ ಅನುಕೂಲವಾಗಿದೆ. ನಮ್ಮ ಸಿಎಂ ಭಾವನಾತ್ಮಕ ವಿಚಾರವಾಗಿ ಕಣ್ಣೀರು ಹಾಕಿದರೆ, ಪ್ರಧಾನಿ ಒಮ್ಮೆಯೂ ಕಣ್ಣೀರು ಹಾಕಿದ್ದು ನೋಡಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು.

ಬಿಜೆಪಿ ಅಂದರೆ ಮೋದಿ ಹಾಗೂ ಅಮಿತ್ ಷಾ ಅನ್ನುವಂತಾಗಿದೆ. ಈ ಪಕ್ಷದಲ್ಲಿ ಅಭ್ಯರ್ಥಿಗಳು ನಿಮಿತ್ತ ಮಾತ್ರ. ಮೋದಿ ನನಗೆ ವೋಟ್ ಕೊಡಿ ಎನ್ನುತ್ತಿದ್ದಾರೆ. ಪ್ರಧಾನಿ ಭಾಷಣದಿಂದ ರಾಜ್ಯ, ಜಿಲ್ಲೆಗೆ ಯಾವುದೇ ಸ್ಪಷ್ಟವಾಗಿ ಸಂದೇಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಭಾರಿ ಮತಗಳ ಅಂತರದಿಂದ ಬಿಜೆಪಿಗೆ ಸೋಲಾಗಲಿದೆ ಎಂದು ಶಿವಾನಂದ ಪಾಟೀಲ್ ಹೇಳಿದರು.