ಸಚಿವ ರೇವಣ್ಣ ಮತ ಹಾಕಿದ್ದ ಬೂತ್ ಸಿಬ್ಬಂದಿ ಸಸ್ಪೆಂಡ್
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಚಿವ ರೇವಣ್ಣ ಮತ ಹಾಕಿದ್ದ ಬೂತ್ ಸಿಬ್ಬಂದಿ ವಜಾಗೊಳಿಸಲಾಗಿದೆ.
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಗ್ರಾಮದಲ್ಲಿ ಮತದಾನ ನಡೆಯುವ ವೇಳೆ ಅಕ್ರಮ ಮತದಾನಕ್ಕೆ ಸಹಕರಿಸಿದರೆಂಬ ದೂರಿನ ಮೇರೆಗೆ ಮತಗಟ್ಟೆಯ ಮೂವರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಮಾನತು ಮಾಡಿದ್ದಾರೆ.
"
ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಪಿಆರ್ಓಎಲ್ವಿ ಪಾಲಿಟೆಕ್ನಿಕ್ನ ಉಪನ್ಯಾಸಕ ವಿ.ಯೋಗೇಶ್ ಮತ್ತು ಎಪಿಆರ್ಓಗಳಾದ ಪುರ್ಲೇಹಳ್ಳಿ ಪ್ರಾಥಮಿಕ ಶಾಲೆ ಶಿಕ್ಷಕ ಪಿ.ಸಿ.ರಾಮಚಂದ್ರ ಮತ್ತು ಚುನಾವಣಾ ಸಿಬ್ಬಂದಿ ದೊಡ್ಡಬ್ಯಾಗತವಳ್ಳಿಯ ಪ್ರಾಥಮಿಕ ಶಾಲೆ ಶಿಕ್ಷಕ ದಿನೇಶ್ ಎಂಬುವರನ್ನು ಅಮಾನತು ಮಾಡಲಾಗಿದೆ.
ಹೊಳೆನರಸೀಪುರ ತಾಲೂಕು ಮಾರ್ಗೋಡನಹಳ್ಳಿಯ ಮಾಯಣ್ಣ ಮತ್ತು ಎಂ.ಎನ್.ರಾಜು ಎಂಬುವರು, ಏ.18ರಂದು ಮತದಾನ ಮಾಡಲು ಬಂದ ಸಚಿವ ಎಚ್.ಡಿ.ರೇವಣ್ಣನವರು ಮತಗಟ್ಟೆಯ ಮತದಾರರಲ್ಲದವರಿಂದಲೂ ಮತ ಹಾಕಿಸಿದ್ದರು ಎಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮತಗಟ್ಟೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ವೀಕ್ಷಣೆ ಮಾಡಿದ ನಂತರ ಜಿಲ್ಲಾಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ.