ನಟಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್​ ಕುಮಾರಸ್ವಾಮಿ ನಡುವೆ ಚುನಾವಣಾ ಅಖಾಡ ಸಜ್ಜಾಗಿದ್ದಾಗಿನಿಂದ ಸಕ್ಕರೆ ನಾಡಿನ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. 

ಮಂಡ್ಯ, [ಮಾ.23]: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರ ಮಾತಿನ ಸಮರ ಮುಂದುವರಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಲತಾಗೆ ನಟರಾದ ದರ್ಶನ್ ಹಾಗೂ ಯಶ್ ಬೆಂಬಲ ವಿಚಾರವಾಗಿ ಶನಿವಾರ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಯಾರದ್ದೋ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳಲು ಆಗಲ್ಲ. ಯಾರಿಗೆ ಬುದ್ಧಿ ಕಲಿಸಬೇಕೆಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ನಿಖಿಲ್ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿ, ಕತ್ತಲೆಯಲ್ಲಿ ನಿಂತು ಕಲ್ಲು ಹೊಡೆದರೆ ನಾವು ಹೆದರಲ್ಲ. ಕಲ್ಲು ಹೊಡೆದು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮಂಡ್ಯ ಜಿಲ್ಲೆಗೆ ಕಳಂಕ ತರುವಂಥ ಕೆಲಸ ಮಾಡಬೇಡಿ. ಅಂತಹ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಟೀಕಾ ಪ್ರಹಾರ ನಡೆಸಿದರು.

ಮಂಡ್ಯ ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ. ದರ್ಶನ್ ಮನೆ ಮೇಲೆ ನಡೆದಿರುವ ದಾಳಿ ಖಂಡಿಸ್ತೇನೆ. ಯಾರ ಅಭಿಮಾನಿಗಳು ದಾಳಿ ಮಾಡಿದರೂ ತಪ್ಪೆ ಎಂದರು.