'ಮಾಯಾವತಿ ದೇಶದ ಪ್ರಧಾನಿ ಆಗುವುದು ಖಚಿತ'
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳಲ್ಲಿ ಅಧಿಕಾರ ಪಡೆಯಲು ಕಸರತ್ತು ನಡೆಯುತ್ತಿದ್ದು, ಇತ್ತ ಬಿಎಸ್ ಪಿ ನಾಯಕಿ ಮಾಯಾವತಿ ಪ್ರಧಾನಿ ಆಗುವುದು ಖಚಿತ ಎಂದು ಪಕ್ಷದ ಮುಖಂಡರೋರ್ವರು ಹೇಳಿದ್ದಾರೆ.
ಆನೇಕಲ್: ರಾಷ್ಟ್ರದಲ್ಲಿ ತೃತೀಯ ಶಕ್ತಿ ಉದಯವಾಗುತ್ತಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಹಿಂದೆ ಆಳಿದ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಗಳಿಂದಾಗಿ ದೇಶ ದ ಜನತೆ ರೋಸಿಹೋಗಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಪ್ರಾಂತೀಯ ಪಕ್ಷಗಳ ಕೂಟವನ್ನು ಆಯ್ಕೆ ಮಾಡಿಕೊಳ್ಳುವ ಸಂಭವವಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಚಿಕ್ಕಾಗಡೆ
ಹೇಳಿದರು.
ತಾಲೂಕಿನ ಚಂದಾಪುರದ ಕೀರ್ತನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೀನ ದಲಿತರು, ಹಿಂದುಳಿದವರು, ಶೋತರು ಹಾಗೂ ಅಲ್ಪ ಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಇರುವ ಅಕ್ಕ ಮಾಯಾವತಿ ಅವರು ಎಲ್ಲರ ವಿಶ್ವಾಸ ಪಡೆದು ಉನ್ನತ ಸ್ಥಾನ ಅಲಂಕರಿಸಿ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಜಿಲ್ಲಾಧ್ಯಕ್ಷ ಸಿ.ಎಲ್.ಮುನಿಯಲ್ಲಪ್ಪ, ಮುಖಂಡರಾದ ಮುನಿರಾಜು, ವಸಂತ್ ಅನಿಲ್ ಇದ್ದರು.