ಸುಮಲತಾ ಗೆಲುವು ನಿಶ್ಚಿತ : ಭವಿಷ್ಯ ನುಡಿದ ಬಿಜೆಪಿ ನಾಯಕ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸುಮಲತಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಅವರು ಗೆದ್ದೆ ಗೆಲ್ತಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.
ದಾವಣಗೆರೆ: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲು ನಿಶ್ಚಿತ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನಲ್ಲಿ ದೇವೇಗೌಡರು, ಮಂಡ್ಯ ಹಾಗೂ ಹಾಸನದಲ್ಲಿ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಸೋತು ಮನೆ ಸೇರುತ್ತಾರೆ. ತುಮಕೂರಿನಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜ, ಹಾಸನದಲ್ಲಿ ಎ.ಮಂಜು ಗೆಲುವು ದಾಖಲಿಸಲಿದ್ದಾರೆ ಎಂದರು.
ಇನ್ನು ಮಂಡ್ಯದಲ್ಲಿ ಸುಮಲತಾ ಅವರಿಗೆ ಎಲ್ಲರ ಬೆಂಬಲವೂ ಇದ್ದು, ಸುಮಲತಾ ಅಂಬರೀಷ್ ಭಾರೀ ಅಂತರದಲ್ಲೇ ಜಯ ದಾಖಲಿಸಲಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಈಗಾಗಲೇ ಗೆದ್ದಾಗಿದೆ. ಎಷ್ಟುಮತಗಳ ಅಂತರ ಎಂಬುದಷ್ಟೇ ಲೆಕ್ಕ ಮಾಡಬೇಕಷ್ಟೇ ಎಂದು ತಿಳಿಸಿದರು.
ರಾಜ್ಯದಲ್ಲಿ 22 ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ. ದೇಶದಲ್ಲಿ ಬಿಜೆಪಿ ಸ್ವಂತ ಬಲ ಮೇಲೆಯೇ 300 ಸ್ಥಾನ ಗಳಿಸಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.
ವಿದೇಶೀ ಹೂಡಿಕೆದಾರರು ನಮ್ಮ ದೇಶದತ್ತ ಮುಖ ಮಾಡುತ್ತಿದ್ದು, 16 ಲಕ್ಷ ಕೋಟಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿಯಲ್ಲೂ ಕ್ರಾಂತಿಕಾರಿ ಬದಲಾವಣೆ ಮೋದಿ ಆಡಳಿತದಲ್ಲಿ ಆಗಿದೆ. ಮುಂದೆಯೂ ಆಗಲಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬೆಳಗಾವಿ ಭಾಗದ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ದಾವಣಗೆರೆಯಲ್ಲೂ ನಮ್ಮ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಸತತ 4ನೇ ಬಾರಿಗೆ ಜಯ ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.