ಜೆಡಿಎಸ್ ಅಭ್ಯರ್ಥಿಯಾದ ಮಧ್ವರಾಜ್ ಗೆ ಸಂಕಷ್ಟ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಚುನಾವಣಾ ಕಾವು ಜೋರಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಮೋದ್ ಮಧ್ವರಾಜ್ ಪರ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರೇ ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರು : ಇಷ್ಟ ಇಲ್ಲದಿದ್ದರೂ ಅನಿವಾರ್ಯವಾಗಿ ಮೈತ್ರಿ ಒಪ್ಪಂದದ ನೆಪದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪಡೆದುಕೊಂಡ ಜೆಡಿಎಸ್ ಪಕ್ಷಕ್ಕೆ ಎದುರಾಗಿದ್ದ ಅಭ್ಯರ್ಥಿಯ ಕೊರತೆಯನ್ನೇನೋ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೀಗಿಸಿದ್ದಾರೆ.
ಆದರೆ ಮೂಲ ಪಕ್ಷ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿರುವ ಅವರಿಗೆ ಎಲ್ಲವೂ ಸುಗಮವಾಯಿತು ಎಂದುಕೊಳ್ಳುವಷ್ಟರಲ್ಲೇ ಸಾಲುಸಾಲು ಸಂಕಷ್ಟ ಎದು ರಾಗುತ್ತಿವೆ. ಜೆಡಿಎಸ್ ಸೇರುವುದಕ್ಕಾಗಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನೂ ಕಳೆದುಕೊಂಡಿರುವ ಪ್ರಮೋದ್ ಮಧ್ವರಾಜ್ ಅವರ ಜೊತೆಗೆ ಚುನಾವಣಾ ಪ್ರಚಾರಕ್ಕೆ ಹೋಗುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ ನಾಯಕರೂ ಹಿಂದೇಟು ಹಾಕುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 1 ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನೂ ಗೆದ್ದುಕೊಳ್ಳಲಾಗದ ಜೆಡಿಎಸ್ನ ಬೆರಳೆಣಿಕೆಯ ಕಾರ್ಯಕರ್ತರ ಜತೆ ಪ್ರಮೋದ್ ಪ್ರಚಾರ ಕಣಕ್ಕಿಳಿಯಬೇಕಾಗಿದೆ.