ಅಭಿಷೇಕ್ ಅಂಬರೀಶ್ ಗೆ ನಿಖಿಲ್ ತಿರುಗೇಟು
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಅಭ್ಯರ್ಥಿ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಅತ್ಯಾಪ್ತ ಗೆಳೆಯರಾಗಿದ್ದ ಅಭಿಷೇಕ್ ಹಾಗೂ ನಿಖಿಲ್ ಇದೀಗ ರಾಜಕೀಯದಿಂದ ಪರಸ್ಪರ ವಾಕ್ ಪ್ರಹಾರ ನಡೆಸುತ್ತಿದ್ದಾರೆ.
ಮಂಡ್ಯ: ಅಂಬರೀಷ್ ಹೆಸರು ಹೇಳಿಕೊಂಡು ನಾನು ಮತ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ನೇರ ತಿರುಗೇಟು ನೀಡಿದರು.
ಮದ್ದೂರು ತಾಲೂಕಿನ ಕೆಸ್ತೂರಿನಲ್ಲಿ ಮಾತನಾಡಿದ ನಿಖಿಲ್, ಕುಮಾರಸ್ವಾಮಿ ಟವೆಲ್ ಹಾಕಿಕೊಂಡು ಅಳುತ್ತಾರೆ ಎಂಬ ಗೆಳೆಯ ಅಭಿಷೇಕ್ ಹೇಳಿಕೆಗೆ ಖಾರವಾಗಿ ಉತ್ತರಿಸಿದರು. ನನ್ನ ತಂದೆ ನಾಟಕವಾಡಿಕೊಂಡು ರಾಜಕೀಯ ಮಾಡುತ್ತಿಲ್ಲ. ಹಾಗೇ ನಾಟಕ ಮಾಡಿದ್ದರೆ ಮಂಡ್ಯದಲ್ಲಿ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿತ್ತೆ? ಎಂದರು.
ನನ್ನ ವಿರೋಧಿಗಳ ಬಗ್ಗೆ ಒಂದು ಶಬ್ದ ಮಾತಾನಾಡಬಾರದು ಎಂದುಕೊಂಡಿದ್ದೆ. ಬಹಳಷ್ಟು ಜನ ದೇವೇಗೌಡ, ಕುಮಾರಸ್ವಾಮಿ ಮೇಲೆ ವಿನಾಕಾರಣ ಟೀಕೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗೆ ಅವರ ತಂದೆ - ತಾಯಿ ಸರಿಯಾದ ಸಂಸ್ಕೃತಿಯಿಂದ ಬೆಳೆಸಿಲ್ಲ ಎಂದು ಭಾವಿಸಬಹುದೇ? ಎಂದರು.