‘ರಾಷ್ಟ್ರ ನಾಯಕರನ್ನೂ ಮೀರಿಸಿದ ನಿಖಿಲ್’
ಲೋಕಸಭಾ ಚುನಾವಣೆ ಸಮರ ಆರಂಭವಾಗಿದೆ.ರಾಜ್ಯದಲ್ಲಿ ಅಭ್ಯರ್ಥಿಗಳು ಗೆಲುವಿನ ಭರವಸೆಯಲ್ಲಿದ್ದಾರೆ.
ಶಿವಮೊಗ್ಗ: ರಾಷ್ಟ್ರ ಮಟ್ಟದ ನಾಯಕರನ್ನೂ ಮೀರಿಸಿ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಇದಕ್ಕೆ ಮಾಧ್ಯಮಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯದ ದಾಟಿಯಲ್ಲಿ ಹೇಳಿದ್ದಾರೆ.
ಆನವಟ್ಟಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಚುನಾವಣೆಗೆ ಪ್ರಧಾನಿ ಮೋದಿಗಿಂತ ಹೆಚ್ಚು ಪ್ರಚಾರ ನೀಡಲಾಗಿದೆ. ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿಗೆ ಬಂದಿದ್ದರು ಎಂದರೆ ಅವರನ್ನೂ ಮೀರಿದ ಕ್ಷೇತ್ರ ಮಂಡ್ಯವಾಗಿತ್ತು ಎಂದರ್ಥ. ಮಾಧ್ಯಮಗಳು ನಿಖಿಲ್ ಕುಮಾರಸ್ವಾಮಿಯವರನ್ನು ಅಂತಾರಾಷ್ಟ್ರೀಯ ನಾಯಕನನ್ನಾಗಿಸಿವೆ ಎಂದರು.
23-25 ಸೀಟು ಮೈತ್ರಿಕೂಟಕ್ಕೆ: ಇದೇ ವೇಳೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 23ರಿಂದ 25 ಕ್ಷೇತ್ರವನ್ನು ಮೈತ್ರಿಕೂಟ ಗೆದ್ದುಕೊಳ್ಳಲಿದೆ. ರಾಜ್ಯದ ಎಲ್ಲ ಕಡೆಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳಿಗೆ ಉತ್ತಮ ರೀತಿಯ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.