ಥೇಟರ್ ಹುಡುಗನ ಹಣ ತಂದಿಟ್ಟು ಕುತಂತ್ರ : ರೇವಣ್ಣ
ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯದ ವಿವಿಧ ನಾಯಕರ ಮೆಲೆ ಐಟಿ ದಾಳಿ ನಡೆದಿದ್ದು, ಈ ದಾಳಿ ಸಂಬಂಧ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಹಾಸನ : ಜಿಲ್ಲೆಯಲ್ಲಿ ಚುನಾವಣೆ ವೇಳೆ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಕೀಳು ಮಟ್ಟದ ರಾಜಕಾರಣ ಮಾಡಿತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳೆನರಸೀಪುರದ ನಮ್ಮ ಚಿತ್ರಮಂದಿರದಲ್ಲಿ ಕೆಲಸ ಮಾಡುವ ಹುಡುಗ ಚಿತ್ರ ಪ್ರದರ್ಶನದಿಂದ ಸಂಗ್ರಹವಾಗಿದ್ದ ಹಣ ತೆಗೆದುಕೊಂಡು ಬರುತ್ತಿದ್ದ.
ಈ ವೇಳೆ ಐಟಿ ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ಆತನ ಕುತ್ತಿಗೆಪಟ್ಟಿಹಿಡಿದು ಎಳೆದುಕೊಂಡು ಬಂದು ಆತನಲ್ಲಿದ್ದ ಹಣವನ್ನು ಪಡೆದುಕೊಂಡಿದ್ದಾರೆ. ನಂತರ ಆ ಹಣವನ್ನು ನನ್ನ ಬೆಂಗಾವಲಿನ ಕಾರಿನಲ್ಲಿದ್ದ ನನ್ನ ಪಿಎ ಇಟ್ಟಿದ್ದ ಬಟ್ಟೆಬ್ಯಾಗ್ನಲ್ಲಿ ಇಟ್ಟು ಪೋಟೋ, ವಿಡಿಯೋ ಮಾಡಿಕೊಂಡಿದ್ದಾರೆ. ಇಂತಹ ಕೀಳುಮಟ್ಟದಲ್ಲಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ನನ್ನ ಕಾರನ್ನು ಏ.17ರಂದು ರಾತ್ರಿಯೇ ಸ್ವತಃ ಡಿಸಿ ತಪಾಸಣೆ ಮಾಡಿದ್ದಾರೆ. ಆಗ ಸಿಗದ ಹಣ ಮತ್ತೆ ಹೇಗೆ ಸಿಗಲಿಕ್ಕೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಳೆನರಸೀಪುರ ಪಟ್ಟಣದಲ್ಲಿ ತರಕಾರಿ ಮಾರುವ ನಮ್ಮ ಕಾರ್ಯಕರ್ತನ ಮನೆಯಲ್ಲಿ 80 ಸಾವಿರ ರು. ಮತ್ತು ಎರಡು ಮೂಟೆ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ. ದಾಳಿ ನಡೆಸಿದ ಕೆಲ ಮುಖಂಡರ ಮನೆಗಳಲ್ಲಿ 3, 6 ಸಾವಿರ ರು. ಸಿಕ್ಕಿದೆ ಅಷ್ಟೆ. ಐಟಿ ಇಲಾಖೆ ಬಳಸಿ ನಮ್ಮ ಮುಖಂಡರಿಗೆ ತೊಂದರೆ ನೀಡಲಾಯಿತು ಎಂದು ಟೀಕಿಸಿದರು.
ಕೃತಜ್ಞತೆ ಸಲ್ಲಿಸಿದ ರೇವಣ್ಣ: ಹಾಸನದ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಪ್ರಜ್ವಲ್ಗೆ ಲೀಡ್ ಬರುತ್ತೆ. ಹೊಳೇನರಸೀಪುರದಲ್ಲಿ ಅತೀ ಹೆಚ್ಚು ಮತಗಳು ಸಿಗಲಿವೆ. ಅಲ್ಲದೇ, ಮಂಡ್ಯ, ಹಾಸನ, ತುಮಕೂರು ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಖಚಿತ. ಚಿಕ್ಕಮಗಳೂರು ಆಶ್ಚರ್ಯ ಫಲಿತಾಂಶ ಬರಲಿದೆ. ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರಗಳಲ್ಲಿ 10 ಕಡೆ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದರು.